ಉದಯವಾಹಿನಿ, ಭವಿಷ್ಯ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಸಂಪೂರ್ಣ ಅರೆ ಭಾಷೆಯ ನಡುಬೆಟ್ಟು ಅಪ್ಪಣ್ಣ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಬಿಡುಗಡೆಗೂ ಪೂರ್ವದಲ್ಲೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ದಿನ, ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡಿದೆ. ಚಲನಚಿತ್ರೋತ್ಸವಗಳಲ್ಲಿ ಈ ಚಿತ್ರವನ್ನು ವೀಕ್ಷಿಸಿದವರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಮೂಲತಃ ಗಾಯಕಿಯಾಗಿರುವ ಅನುಪಮ ಶರಧಿ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟಿರುವ ನಿರ್ದೇಶಕಿಯರ ಸಾಲಿಗೆ ಅನುಪಮ ಅವರು ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು ಕೆಲವು ಸರ್ಕಾರಿ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿರುವ ಅನುಭವ ಅನುಪಮ ಅವರಿಗಿದೆ. ಈ ಚಿತ್ರಕ್ಕೆ ಕುಮಾರ್ ಈಶ್ವರ್ ಕಥೆ ಬರೆದಿದ್ದರೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಅನುಪಮ ಶರಧಿ ನಿರ್ಮಾಪಕರೂ ಹೌದು.
ನಡುಬೆಟ್ಟು ಅಪ್ಪಣ್ಣ ಕಥೆಯು ದಬ್ಬಡ್ಕ ಎಂಬ ದೂರದ ಹಳ್ಳಿಯಲ್ಲಿ ವಾಸಿಸುವ ಅಪ್ಪಣ್ಣ ಎಂಬ ಜಿಪುಣ ಮತ್ತು ಸ್ವಾರ್ಥಿ ವ್ಯಕ್ತಿ ಮತ್ತು ಅವನ ಕುಟುಂಬದ ಸುತ್ತ ಸುತ್ತುತ್ತದೆ. ಅವನು ಹಳ್ಳಿಯ ಕಷ್ಟಗಳ ಬಗ್ಗೆಯಾಗಲಿ ಅಥವಾ ಅವನ ಕುಟುಂಬದ ಅಗತ್ಯಗಳ ಬಗ್ಗೆಯಾಗಲಿ ಕಾಳಜಿ ವಹಿಸುವುದಿಲ್ಲ. ಅವನು ಸೇರಿದಂತೆ ಗ್ರಾಮಸ್ಥರು ಆಗಾಗ್ಗೆ ತಮ್ಮ ಮೇಲೆ ಮತ್ತು ತಮ್ಮ ತೋಟಗಳ ಮೇಲೆ ಆನೆ ದಾಳಿಯಿಂದ ಬಳಲುತ್ತಾರೆ. ಹತ್ತಿರದ ಪಟ್ಟಣಗಳು, ರಸ್ತೆಗಳು, ಆಸ್ಪತ್ರೆ, ಶಾಲೆಗಳು ಮುಂತಾದ ಮೂಲಭೂತ ಅವಶ್ಯಕತೆಗಳಿಲ್ಲದೆ ಗ್ರಾಮವದು. ಹತ್ತಿರದ ಪಟ್ಟಣಗಳಿಗೆ ಹೋಗಲು ಅವರು ತೆಪ್ಪವನ್ನು ಬಳಸಬೇಕಾಗುತ್ತದೆ.ಹಲವಾರು ಸಾವುಗಳನ್ನು ಅನುಭವಿಸಬೇಕಾಗುತ್ತದೆ. ಆನೆಯೊಂದು ತನ್ನ ತೋಟಗಳ ಮೇಲೆ ದಾಳಿ ಮಾಡಿದಾಗ ಅಪ್ಪಣ್ಣ ಥಟ್ಟನೆ ಚೇತರಿಸಿಕೊಳ್ಳುತ್ತಾನೆ. ಅದರಲ್ಲಿ ಅವನು ತನ್ನ ಹೆಂಡತಿ ಮತ್ತು ಮಗನನ್ನು ಕಳೆದುಕೊಳ್ಳುತ್ತಾನೆ. ಈ ಘಟನೆಯ ನಂತರ, ಅಪ್ಪಣ್ಣ ಸಂಪೂರ್ಣವಾಗಿ ರೂಪಾಂತರಗೊಳ್ಳುತ್ತಾನೆ.
