ಉದಯವಾಹಿನಿ, ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರಿಗೆ ಪ್ರಪಂಚದಾದ್ಯಂತ ಇರುವ ಫ್ಯಾನ್ಸ್ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇದೀಗ ಅವರ ಪುತ್ರ ಆರ್ಯನ್ ಖಾನ್ ಸರದಿ. ಸಾಮಾನ್ಯವಾಗಿ ಕ್ಯಾಮೆರಾ ಕಣ್ಣುಗಳಿಂದ ದೂರವಿರುವ ಮತ್ತು ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಆರ್ಯನ್ ಖಾನ್, ಕಳೆದ ವಾರಾಂತ್ಯದಲ್ಲಿ ಬೆಂಗಳೂರಿಗೆ ದಿಢೀರ್ ಭೇಟಿ ನೀಡುವ ಮೂಲಕ ಇಲ್ಲಿನ ಸಿನಿ ಪ್ರಿಯರಲ್ಲಿ ಮತ್ತು ಪಾರ್ಟಿ ಪ್ರಿಯರಲ್ಲಿ ಸಂಚಲನ ಮೂಡಿಸಿದ್ರು.
ಮುಂಬೈನಿಂದ ಬೆಂಗಳೂರಿಗೆ ಬಂದಿಳಿದ ಆರ್ಯನ್ ಖಾನ್ಗೆ ಅದ್ಧೂರಿ ಸ್ವಾಗತವೇ ಸಿಕ್ಕಿತ್ತು. ನಗರದ ಪ್ರಮುಖ ಮತ್ತು ಜನಪ್ರಿಯ ನೈಟ್ ಸ್ಪಾಟ್ ಒಂದಕ್ಕೆ ವಿಶೇಷ ಅತಿಥಿಯಾಗಿ ಆರ್ಯನ್ ಆಗಮಿಸಿದ್ದರು. ಮೂಲಗಳ ಪ್ರಕಾರ, ಆರ್ಯನ್ ಖಾನ್ ರಾತ್ರಿ ಸರಿಯಾಗಿ 11 ಗಂಟೆಗೆ ಎಂಟ್ರಿ ಕೊಟ್ಟರು. ಸುಮಾರು 12:45 ರವರೆಗೂ ಅಂದರೆ ನಡುರಾತ್ರಿಯವರೆಗೂ ಅಲ್ಲೇ ಇದ್ದು, ಬೆಂಗಳೂರಿನ ನೈಟ್ ಲೈಫ್ ಅನ್ನು ಸವಿದಿದ್ದಾರೆ. ಇದೇ ವೇಳೆ ಪಬ್ನ ಬಾಲ್ಕನಿಯಲ್ಲಿ ನಿಂತು ಫ್ಯಾನ್ಸ್ನತ್ತ ಆರ್ಯನ್ ಮಧ್ಯದ ಬೆರಳು ತೋರಿಸಿ ದುರ್ವರ್ತನೆ ತೋರಿದ್ದಾರೆ. ನವೆಂಬರ್ 28 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರ್ಯನ್ ಖಾನ್ಗೆ ಸಚಿವ ಹಾಗೂ ಶಾಸಕರ ಪುತ್ರರೂ ಸಾಥ್ ಕೊಟ್ಟಿದ್ದು ಖಂಡನೀಯ. ಆರ್ಯನ್ ಖಾನ್ಗೆ ಜೊತೆಯಾಗಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸ್ಥಳದಲ್ಲಿದ್ರು. ಝೈದ್ ಖಾನ್ ಹಾಗೂ ನಲಪಾಡ್ ಇಬ್ಬರೂ ಆರ್ಯನ್ ಖಾನ್ ಅಕ್ಕ ಪಕ್ಕದಲ್ಲೇ ನಿಂತುಕೊಂಡಿದ್ದರು.
ಆಗ ಜನರತ್ತ ಕೈಬೀಸಿದ ಆರ್ಯನ್ ಖಾನ್ ಅಸಭ್ಯವಾಗಿ ಎರಡೂ ಕೈಗಳನ್ನ ಎತ್ತಿ ಮಧ್ಯದ ಬೆರಳು ತೋರಿಸಿದ್ರು. ಆದರೆ ದುರ್ವರ್ತನೆ ತೋರಿದ ಕ್ಷಣವನ್ನ ನಲಪಾಡ್ ಹಾಗೂ ಝೈದ್ ಖಾನ್ ಇಬ್ಬರೂ ಎಂಜಾಯ್ ಮಾಡಿ ನಕ್ಕಿದ್ದರು.
ಕನ್ನಡ ನಾಡಿನಲ್ಲಿ ಕನ್ನಡಿಗರೆದುರು ನಿಂತು ಆರ್ಯನ್ ಖಾನ್ ಅಸಭ್ಯ ವರ್ತನೆ ತೋರಿದ್ದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸಚಿವ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ʻಪಬ್ಲಿಕ್ ಟಿವಿʼಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಆರ್ಯನ್ ಖಾನ್ ಜನರನ್ನ ನೋಡಿ ಕೈ ತೋರಿಸಲಿಲ್ಲ. ಅಲ್ಲಿ ಅವರ ಸ್ನೇಹಿತರೊಬ್ಬರು ನಿಂತಿದ್ದರು. ಅವರನ್ನ ನೋಡಿ ಫ್ರೆಂಡ್ಶಿಪ್ನಲ್ಲಿ ಕೈ ತೋರಿಸಿದ್ದಾರೆ. ಆದರೂ ಜನರ ಮಧ್ಯೆ ನಿಂತು ಮಧ್ಯದ ಬೆರಳು ತೋರಿಸಿದ್ದು ತಪ್ಪು. ಆರ್ಯನ್ ಖಾನ್ ನನಗೆ ಬಹು ವರ್ಷಗಳಿಂದಲೂ ಸ್ನೇಹಿತರು. ಆ ಸಂದರ್ಭಕ್ಕೆ ನನಗೆ ಅದು ತಪ್ಪು ಅನ್ನಿಸಲಿಲ್ಲ. ಜನಕ್ಕೆ ತೋರಿಸಿದ್ದರೆ ತಪ್ಪಾಗುತ್ತಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
