ಉದಯವಾಹಿನಿ, ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಸುತ್ತೂರಿನ ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ 1066ನೇ ಜಯಂತಿ ಮಹೋತ್ಸವ ಡಿ.15 ರಿಂದ ಅರಂಭವಾಗಲಿದೆ. ಡಿ.16 ರಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ದೆಹಲಿ ಭದ್ರತಾ ಪಡೆ ಅಧಿಕಾರಿಗಳು ಇಂದು ಮಳವಳ್ಳಿಯ ಮಾರೆಹಳ್ಳಿ ಬಳಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಜಾಗದಲ್ಲಿ ಹೆಲಿಕಾಪ್ಟರ್ ಅಣಕು ಪ್ರದರ್ಶನ ನಡೆಸಿದರು.
ಮಾರೇಹಳ್ಳಿ ಬಳಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಭಾನುವಾರ ದೆಹಲಿ ಭದ್ರತಾ ಪಡೆ ಅಧಿಕಾರಿಗಳ ತಂಡ ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಕುಮಾರ ನೇತೃತ್ವದಲ್ಲಿ ಆಗಮಿಸಿ ಹೆಲಿಕ್ಯಾಪ್ಟರ್ ಅಣಕು ಪ್ರದರ್ಶನ ನಡೆಸಿದರು. ರಾಷ್ಟ್ರಪತಿಗಳು ಬಂದಾಗ ಎಲ್ಲಿ? ಯಾವ ರೀತಿ ಲ್ಯಾಂಡಿಂಗ್ ಮಾಡುವುದರ ಕುರಿತು ಪ್ರಾಯೋಗಿಕವಾಗಿ ಪ್ರದರ್ಶನ ನಡೆಸಿದರು.
ಮಳವಳ್ಳಿ ಪಟ್ಟಣಕ್ಕೆ ರಾಷ್ಟ್ರಪತಿಗಳ ಅಗಮನ ಹಿನ್ನೆಲೆಯಲ್ಲಿ ದೆಹಲಿ ಭದ್ರತಾ ಪಡೆಯ ಅಧಿಕಾರಿಗಳ ನಿರ್ದೇಶನದಂತೆ ಪಟ್ಟಣದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಫುಟ್ ಪಾತ್ ಅಂಗಡಿಗಳ ತೆರವು, ವಾಹನಗಳ ಸಂಚಾರ ನಿಷೇಧ, ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ.
