ಉದಯವಾಹಿನಿ, ಬೆಂಗಳೂರು : ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆ ಕೇಳಿದರು. ರಾಜ್ಯದ ಹಲವಾರು ನಗರ ಸ್ಥಳೀಯ ಸಂಸ್ಥೆಗಳ (ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ) ಅವಧಿ ಮುಗಿದರೂ ಚುನಾವಣೆಗಳು ನಡೆದಿಲ್ಲ. ಕೂಡಲೇ ಚುನಾವಣೆ ನಡೆಸಬೇಕು. ಪ್ರಜಾಪ್ರಭುತ್ವದ ಆಶಯಕ್ಕೆ ನಾವು ನ್ಯಾಯ ಕೊಡ್ತಾ ಇಲ್ಲ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಆಗಿ 5 ವರ್ಷ ಆಯ್ತು. ಜಿಬಿಎ ಚುನಾವಣೆ ಆಗಿ ವರ್ಷಗಳೇ ಕಳೆಯಿತು. ಚುನಾವಣಾ ಆಯೋಗ ಕೋರ್ಟ್ಗೆ ಹೋಗಿ ಚುನಾವಣೆ ಮಾಡಿಸಿ ಅನ್ನೋ ಹಂತಕ್ಕೆ ಬಂದಿದೆ ವ್ಯವಸ್ಥೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮಯಕ್ಕೆ ತಕ್ಕಂತೆ ನಡೆಸಬೇಕು. ಜನರ ಸಮಸ್ಯೆ, ರೈತರ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ. ಮಾಧ್ಯಮಗಳಲ್ಲಿ, ಪೇಪರ್ನಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಮೊದಲು ಚುನಾವಣೆ ನಡೆಸಿ ಎಂದು ಆಗ್ರಹಿಸಿದರು.
ಇದಕ್ಕೆ ಸಚಿವ ರಹೀಂಖಾನ್ ಉತ್ತರ ನೀಡಿ, ರಾಜ್ಯದಲ್ಲಿ 187 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯವಾಗಿದೆ. ಅವಧಿ ಮುಗಿದು 1 ತಿಂಗಳು ಮಾತ್ರ ಆಗಿದೆ. ಈಗಾಗಲೇ ಫೈಲ್ ರೆಡಿ ಮಾಡಲಾಗಿದೆ. ಮೀಸಲಾತಿ ಮತ್ತು ಡಿಲಿಮಿಟೇಷನ್ ಕೆಲಸ ನಡೆಯುತ್ತಿದೆ. ಹೀಗಾಗಿ ನಮಗೆ ಸಮಯ ಬೇಕು. ಕೆಲವು ಸ್ಥಳೀಯ ಸಂಸ್ಥೆಗಳು ಅಪ್ಗ್ರೇಡ್ ಆಗಿದೆ. ಹೀಗಾಗಿ ತಡವಾಗುತ್ತಿದೆ ಎಂದರು.
