ಉದಯವಾಹಿನಿ, ಬೀದರ್: 99 ಲಕ್ಷ ರೂ. ಸಾಲ ಹಿಂತಿರುಗಿಸದ ಆರೋಪದ ಮೇರೆಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಸವಕಲ್ಯಾಣ ನಗರ ಠಾಣೆಯಲ್ಲಿ ಉದ್ಯಮಿ ಸಂಜು ಸುಗುರೆ ಎಂಬವರು ದೂರು ನೀಡಿದ್ದಾರೆ. 2023ರ ಚುನಾವಣೆ ಸಂದರ್ಭದಲ್ಲಿ ಉದ್ಯಮಿ ಸಂಜು ಸುಗುರೆಯಿಂದ ಶಾಸಕ ಸಲಗರ್ ಚುನಾವಣೆ ವೆಚ್ಚಕ್ಕೆಂದು 99 ಲಕ್ಷ ರೂ. ಸಾಲ ಪಡೆದಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಶ್ಯೂರಿಟಿಗಾಗಿ ಖಾಲಿ ಚೆಕ್ ಹಾಗೂ ಲೆಟರ್ ಹೆಡ್ ಮೇಲೆ ಸೈನ್ ಮಾಡಿ ಶಾಸಕರು ಚೆಕ್ ನೀಡಿದ್ದು, ಎಷ್ಟೇ ಬಾರಿ ಹಣ ಕೇಳಿದರೂ ಶಾಸಕರು ಸಾಲ ಮರುಪಾವತಿಸಿಲ್ಲ. ಬಳಿಕ ಸೆ.14ರಂದು ರಂದು ಹಿರಿಯರ ಸಮ್ಮುಖದಲ್ಲಿ ಹಣ ನೀಡುವುದಾಗಿ ಒಪ್ಪಿ ಸಲಗರ್ ಚೆಕ್ ನೀಡಿದ್ದು, ಸೆ.16ರಂದು ಉದ್ಯಮಿ ಸಂಜು ಸುಗುರೆ ಹೆಂಡತಿ ಹಾಗೂ ಮಗ ಶಾಸಕರ ಮನೆಗೆ ತೆರಳಿದರು. ಶರಣು ಸಲಗರ್ ನೀಡಿದ ಚೆಕ್ ಬ್ಯಾಂಕಿಗೆ ಹಾಕಲು ಖಾತ್ರಿಪಡಿಸಲು ಹೋದ ವೇಳೆ ಶಾಸಕರ ಮನೆಯಲ್ಲಿ ಗಲಾಟೆಯಾಗಿದ್ದು, ಚೆಕ್ ಬ್ಯಾಂಕಿಗೆ ಹಾಕುವುದಾಗಿ ಹೇಳಿದ್ದಕ್ಕಾಗಿ ಉದ್ಯಮಿ ಹೆಂಡತಿ ಹಾಗೂ ಮಗನಿಗೆ ಶಾಸಕ ಶರಣು ಸಲಗರ್ ಧಮ್ಕಿ ಹಾಕಿದ್ದಾರೆ ಎನ್ನಾಲಾಗಿದೆ. ಹಣ ವಾಪಸ್ ಕೊಡಿ ಎಂದು ಮನೆಗೆ ಹೋದರೆ ಅವಾಚ್ಯ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದು, ಸೆ.19ರಂದು ಶರಣು ಸಲಗರ್ ನೀಡಿದ ಚೆಕ್ ಬ್ಯಾಂಕಿಗೆ ಹಾಕಿದ್ರೆ ವಾಪಸ್ ಬಂದಿದೆ.
