ಉದಯವಾಹಿನಿ, ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿರುವ ಕರ್ನಾಟಕ ತಂಡ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ಸೋಮವಾರ ಟೂರ್ನಿಯ ಎ ಗುಂಪಿನ ಮೂರನೇ ಸುತ್ತಿನ ಪಂದ್ಯದಲ್ಲಿ ಕೆ ಶ್ರೀಜಿತ್‌ ಹಾಗೂ ಶ್ರೇಯಸ್‌ ಗೋಪಾಲ್‌ ಅವರ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡ 4 ವಿಕೆಟ್‌ಗಳಿಂದ ಬಲಿಷ್ಠ ತಮಿಳುನಾಡು ತಂಡವನ್ನು ಮಣಿಸಿತು. ಆ ಮೂಲಕ ಎ ಗುಂಪಿನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.
ಅಹಮದಾಬಾದ್‌ನ ಗುಜರಾತ್‌ ಕಾಲೇಜು ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ತಮಿಳುನಾಡು ನೀಡಿದ್ದ 289 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡ, ಮಯಾಂಕ್‌ ಅಗರ್ವಾಲ್‌, ಕೆ ಶ್ರೀಜಿತ್‌ ಹಾಗೂ ಶ್ರೇಯಸ್‌ ಗೋಪಾಲ್‌ ಅವರ ಅರ್ಧಶತಕಗಳ ಬಲದಿಂದ 47.1 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 293 ರನ್‌ಗಳನ್ನು ಗಳಿಸಿ ಗೆದ್ದು ಬೀಗಿತು. ಇದರೊಂದಿಗೆ 50 ಓವರ್‌ಗಳ ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ ಮೂರನೇ ಗೆಲುವನ್ನು ತನ್ನದಾಗಿಸಿಕೊಂಡಿತು. ಕರ್ನಾಟಕ ತಂಡದ ಚೇಸಿಂಗ್‌ನಲ್ಲಿ ಮಯಾಂಕ್‌ ಅಗರ್ವಾಲ್‌, ಕೆ ಶ್ರೀಜಿತ್‌ ಹಾಗೂ ಶ್ರೇಯಸ್‌ ಗೋಪಾಲ್‌ ತಲಾ ಅರ್ಧಶತಕಗಳನ್ನು ಬಾರಿಸಿ ಬಹು ಮುಖ್ಯ ಪಾತ್ರವನ್ನು ವಹಿಸಿದರು. ಇನಿಂಗ್ಸ್‌ ಆರಂಭಿಸಿದ ಮಯಾಂಕ್‌ ಅಗರ್ವಾಲ್‌ 77 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 58 ರನ್‌ ಗಳಿಸಿದರು. ಆದರೆ, ದೇವದತ್‌ ಪಡಿಕ್ಕಲ್‌ (22) ಹಾಗೂ ಕರುಣ್‌ ನಾಯರ್‌ (17) ಅವರು ವಿಫಲರಾದರು. ಇವರ ಜೊತೆಗೆ ಸ್ಮರಣ್‌ ರವಿಚಂದ್ರನ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಆದರೆ, ಒಂದು ಕಡೆ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ಮಯಾಂಕ್‌ ಅಗರ್ವಾಲ್‌, ಅರ್ಧಶತಕ ಬಾರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

Leave a Reply

Your email address will not be published. Required fields are marked *

error: Content is protected !!