ಉದಯವಾಹಿನಿ, ಭಾರತವನ್ನು ಕೆಣಕಲು ಹೋಗಿ ಪಾಕಿಸ್ತಾನ ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಭಾರತವು ತನ್ನ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂಬ ಪಾಕಿಸ್ತಾನದ ಆರೋಪವನ್ನು ವಿದೇಶಾಂಗ ಸಚಿವಾಲಯ ತಳ್ಳಿ ಹಾಕಿದೆ. ಇಸ್ಲಾಮಾಬಾದ್ ದೆಹಲಿಯತ್ತ ಬೆರಳು ತೋರಿಸಿದರೆ ತನ್ನದೇ ಆದ ವಿವಿಧ ಧರ್ಮಗಳ ಅಲ್ಪಸಂಖ್ಯಾತರ ಮೇಲಿನ ಭಯಾನಕ ಮತ್ತು ವ್ಯವಸ್ಥಿತ ದಾಳಿಯ ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಭಾರತದಲ್ಲಿನ ಘಟನೆಗಳ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹೇಳಿಕೆಗಳ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಈ ವಿಷಯದಲ್ಲಿ ಅತ್ಯಂತ ಕಳಪೆ ದಾಖಲೆಯನ್ನು ಹೊಂದಿರುವ ದೇಶದಿಂದ ಬಂದಿರುವ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತಿದ್ದೇವೆ. ವಿವಿಧ ಧರ್ಮಗಳ ಅಲ್ಪಸಂಖ್ಯಾತರನ್ನು ಪಾಕಿಸ್ತಾನ ಭಯಾನಕ ಮತ್ತು ವ್ಯವಸ್ಥಿತವಾಗಿ ಬಲಿಪಶುಗಳನ್ನಾಗಿ ಮಾಡಿರುವುದು, ಮಾಡುತ್ತಿರುವುದು ಗೋಚರವಾಗುತ್ತಲೇ ಇದೆ. ಎಷ್ಟೇ ಬೆರಳು ತೋರಿಸಿದರೂ ಅದನ್ನು ಮರೆಮಾಚಲು ಸಾಧ್ಯವಿಲ್ಲ” ಎಂದು ಹೇಳಿದರು.
