ಉದಯವಾಹಿನಿ, ಹೊಸ ವರ್ಷದ ಆಗಮನಕ್ಕೆ ಸಂಗೀತವೇ ಜೀವಾಳ. ಅದಕ್ಕೆ ಸಾಕ್ಷಿಯೆಂಬಂತೆ, ಸಂಗೀತಾಸಕ್ತರ ಹೃದಯ ಗೆಲ್ಲುತ್ತಿರುವ ಹೊಸ ಆಲ್ಬಮ್ ಒಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಮೈಸೂರು ಮೋಹನ್ – ಸಂಗೀತ ಲೋಕದಲ್ಲಿ ಸುಮಾರು 60 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ, ಕನ್ನಡ ಸಂಗೀತ ರಂಗದ ಜೀವಂತ ದಂತಕಥೆ ಎಂದೇ ಗುರುತಿಸಿಕೊಂಡಿದ್ದಾರೆ. ಮೈಸೂರು ಮೋಹನ್ ಆರ್ಕೆಸ್ಟ್ರಾ ಮೂಲಕ ದೇಶ–ವಿದೇಶಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನಡೆಸಿ, ಸಂಗೀತಾಸಕ್ತರ ಮನಸ್ಸಿನಲ್ಲಿ ಅಮಿಟ್ ಛಾಪು ಮೂಡಿಸಿದ್ದಾರೆ.
ಚಿತ್ರರಂಗದಲ್ಲೂ ತಮ್ಮ ಅಪಾರ ಕೊಡುಗೆಯ ಮೂಲಕ ಹೆಸರುವಾಸಿಯಾದ ಅವರು, ಕಿಲಾಡಿ ಕಿಟ್ಟು, ಬೆಂಕಿ ಚಂಡು, ನಂಜುಂಡ, ಲೀಡರ್ ವಿಶ್ವನಾಥ್ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಿಗೆ ಸಂಗೀತ ಸಂಯೋಜಿಸಿ, ತಮ್ಮದೇ ಆದ ಶೈಲಿಯನ್ನು ಸ್ಥಾಪಿಸಿದ್ದಾರೆ. ಇಂತಹ ಅನುಭವಿ ಹಾಗೂ ಪೌರಾಣಿಕ ಸಂಗೀತ ನಿರ್ದೇಶಕರ ಸಂಯೋಜನೆ ಈ ಹೊಸ ವರ್ಷದ ಗೀತೆಗೆ ವಿಶೇಷ ಘನತೆ ಮತ್ತು ಆಳತೆಯನ್ನು ನೀಡಿದೆ. ಈ ಹೊಸ ವರ್ಷದ ವಿಶೇಷ ಗೀತೆಯು ಈಗಾಗಲೇ ಅಪಾರ ಗಮನ ಸೆಳೆಯುತ್ತಿದೆ. ಈ ಹಾಡಿನ ವಿಶೇಷತೆ ಎಂದರೆ, ಇದರಲ್ಲಿ ಹೊಸ ಪ್ರತಿಭೆಯಾದ ಹಿಮಾ ಎಂ. ಅವರ ಸುಂದರ, ನಯವಾದ ಮತ್ತು ಮನಸೂರೆಗೊಳ್ಳುವ ಧ್ವನಿ. ವೃತ್ತಿಯಲ್ಲಿ ಕಾನೂನು ಅಭ್ಯಾಸ ಮಾಡುತ್ತಿರುವ ಹಿಮಾ, ಸಂಗೀತದ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸುತ್ತಿದ್ದಾರೆ. ಅವರ ಧ್ವನಿಯಲ್ಲಿ ಇರುವ ಮೃದುತ್ವ ಮತ್ತು ಆತ್ಮೀಯತೆ ಶ್ರೋತೃಗಳ ಮನಸ್ಸಿಗೆ ನೇರವಾಗಿ ತಲುಪುತ್ತದೆ.
ಹಿಮಾ ಅವರ ಸಂಗೀತ ಪ್ರತಿಭೆಯನ್ನು ಮೊದಲಿಗೆ ಗುರುತಿಸಿದವರು ಅವರ ತಾಯಿ ಡಾ. ಎ. ಎನ್. ಪದ್ಮಾ. ಸ್ವತಃ ಉತ್ತಮ ಗಾಯಕಿಯೂ ಆಗಿರುವ ಡಾ. ಪದ್ಮಾ ಅವರು, ಒಂದು ದಿನ ಹಿಮಾ ಇಂಗ್ಲಿಷ್ ಹಾಡೊಂದನ್ನು ಹಮ್ಮಿಂಗ್ ಮಾಡುತ್ತಿದ್ದಾಗ, ಆ ಧ್ವನಿಯಲ್ಲಿ ಅಡಗಿದ್ದ ದೇವದತ್ತವಾದ ಪ್ರತಿಭೆಯನ್ನು ಗುರುತಿಸಿದರು. ಆ ಕ್ಷಣವೇ ಹಿಮಾ ಅವರ ಸಂಗೀತಯಾನದ ಆರಂಭಕ್ಕೆ ಕಾರಣವಾಯಿತು. ಹಿಮಾ ಎಂ. ಅವರ ತಂದೆ ಡಾ. ಮಂಜುನಾಥ ಕೆ. ಅವರು ಸಂಗೀತದ ಮೇಲಿನ ಅಪಾರ ಆಸಕ್ತಿಯುಳ್ಳವರು. ಸಂಗೀತವನ್ನು ಹೃದಯದಿಂದ ಪ್ರೀತಿಸುವ ಅವರು, ತಮ್ಮ ಪುತ್ರಿಯಲ್ಲಿರುವ ಸ್ವರಸೌಂದರ್ಯವನ್ನು ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಈ ಆಲ್ಬಮ್ ಅನ್ನು ಡಾ.ಎ.ಎನ್. ಪದ್ಮಾ ಅವರೇ ನಿರ್ಮಿಸಿದ್ದು, ಸಂಗೀತದ ಮೇಲಿನ ಅವರ ಆಸಕ್ತಿ ಮತ್ತು ಕಲಾವಿದರ ಮೇಲಿನ ನಂಬಿಕೆಗೆ ಇದು ಉತ್ತಮ ಉದಾಹರಣೆ. ಹಾಡಿನ ಪೂರ್ವ ಹಾಗೂ ನಂತರದ ನಿರ್ಮಾಣ ಕಾರ್ಯವನ್ನು ಶ್ರೀವಾರಿ ಮ್ಯೂಸಿಕ್ ಕಂಪನಿ ಅತ್ಯಂತ ನಿಖರತೆ ಮತ್ತು ಗುಣಮಟ್ಟದೊಂದಿಗೆ ನಿರ್ವಹಿಸಿದೆ.
