ಉದಯವಾಹಿನಿ, ರಾಯಚೂರು: ಐತಿಹಾಸಿಕ ಅಂಬಾ ಮಠದ ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ. ಈ ಜಾತ್ರೆಯಲ್ಲಿ ಗಾಂಜಾ ಓಡಾಟ ಎಗ್ಗಿಲ್ಲದೆ ನಡೆಯುವುದು ಮಾತ್ರ ವಿಪರ್ಯಾಸ. ಇಲ್ಲಿಗೆ ಬರುವ ಸಾಧು-ಸಂತರ ಜೊತೆ ಭಕ್ತರು ಸಹ ಗಾಂಜಾ ನಶೆಯಲ್ಲಿ ತೇಲಾಡುತ್ತಾರೆ. ಹೀಗಾಗಿ ಈ ಬಾರಿಯಾದ್ರೂ ಗಾಂಜಾಗೆ ಬ್ರೇಕ್ ಬೀಳುತ್ತಾ ಎನ್ನುವಂತಾಗಿದೆ.
ರಾಯಚೂರಿನ ಸಿಂಧನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ, ಸುಕ್ಷೇತ್ರ ಸಿದ್ಧಪರ್ವತ ಅಂಬಾಮಠದಲ್ಲಿನ ಅಂಬಾದೇವಿ ದೇವಸ್ಥಾನಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಅಂಬಾದೇವಿ ಜಾತ್ರೆ ಜನವರಿ 8ರವರೆಗೂ ನಡೆಯಲಿದೆ. ಮಹಾ ರಥೋತ್ಸವ ಪ್ರತಿ ಬಾರಿಯೂ ಅದ್ಧೂರಿಯಾಗಿ ನಡೆಯುತ್ತೆ. ಇವತ್ತು ಮಹಾರಥೋತ್ಸವ ಮತ್ತು ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್, ವಿವಿಧ ಸಚಿವರು ಭಾಗವಹಿಸಲಿದ್ದಾರೆ. ಇಂತಹ ಐತಿಹಾಸಿಕ ಜಾತ್ರೆಯಲ್ಲಿ ಪ್ರತೀ ವರ್ಷವೂ ಗಾಂಜಾ ಎಗ್ಗಿಲ್ಲದೇ ಓಡಾಡುವುದು ಈಗಲೂ ವಿಪರ್ಯಾಸವಾಗಿ ಉಳಿದಿದೆ.
