ಉದಯವಾಹಿನಿ , ತಿರುವನಂತಪುರಂ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಭಿಕ್ಷುಕನ ಬಳಿ 4 ಲಕ್ಷ ರೂ. ಗೂ ಅಧಿಕ ಹಣ ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಚಾರುಮ್ಮೂಟ್ ಮತ್ತು ಆಲಪ್ಪುಳ ಬಳಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನೊಬ್ಬನಿಗೆ ಅಪಘಾತವಾಗಿದೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆತನ ಬಳಿ ಇದ್ದ ಕಂಟೇನರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ನಿಷೇಧಿತ 2,000 ರೂ. ನೋಟುಗಳು, ವಿದೇಶಿ ಕರೆನ್ಸಿಗಳು ಸೇರಿದಂತೆ 4.5 ಲಕ್ಷ ರೂ. ಗೂ ಹೆಚ್ಚು ಹಣ ಪತ್ತೆಯಾಗಿದೆ.
ಭಿಕ್ಷಕ ತನ್ನ ಹೆಸರು ಅನಿಲ್ ಕಿಶೋರ್ ಎಂಬುದಾಗಿ ಹೇಳಿದ್ದ. ಬಳಿಕ ಯಾವುದೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸೋಮವಾರ ರಾತ್ರಿ ಅಪಘಾತವಾಗಿದ್ದು, ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಬಳಿಕ ಆತನ ಬಳಿ ಇದ್ದ ಕಂಟೇನರ್ ಅನ್ನು ಪೊಲೀಸರು ವಶಕ್ಕೆ ಪಡೆದರು. ಸ್ಥಳೀಯ ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್ ಸಮ್ಮುಖದಲ್ಲಿ ಕಂಟೇನರ್ ಅನ್ನು ತೆರೆಯಲಾಗಿದೆ. ಇದರಲ್ಲಿ ಒಟ್ಟು 4.5 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ನಗದು ರೂಪದಲ್ಲಿ ಪತ್ತೆಯಾಗಿದೆ. ಇದರಲ್ಲಿ ನಿಷೇಧಿತ 2,000 ರೂ. ನೋಟುಗಳು ಮತ್ತು ವಿದೇಶಿ ಕರೆನ್ಸಿಗಳು ಕೂಡ ಇತ್ತು. ಈ ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
