ಉಯವಾಹಿನಿ, ಉತ್ತರ ಭಾರತವನ್ನು ತೀವ್ರ ಶೀತಗಾಳಿ ಆವರಿಸುತ್ತಿದ್ದಂತೆ, ಬಡವರು, ನಿರಾಶ್ರಿತರು ಮತ್ತು ನಿರ್ಗತಿಕರ ಬದುಕು ಕಠಿಣವಾಗಿದೆ. ಅನೇಕರು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಈ ನಡುವೆ ಪಂಜಾಬ್ನ ಪಠಾಣ್ಕೋಟ್ನಲ್ಲಿ ಕರುಣಾಮಯಿ ಭಿಕ್ಷುಕರೊಬ್ಬರ ಕಥೆ ಹೊರಹೊಮ್ಮಿದೆ. ಭಿಕ್ಷಾಟನೆಯಿಂದ ಜೀವನ ನಡೆಸುವ ವ್ಯಕ್ತಿಯೊಬ್ಬರು ಅಗತ್ಯವಿರುವವರಿಗೆ ಕಂಬಳಿಗಳನ್ನು ವಿತರಿಸುವ ಮೂಲಕ ಇನ್ನೊಬ್ಬರ ಬಾಳಲ್ಲಿ ಬೆಳಕಾಗಿದ್ದಾರೆ.
ರಾಜು ಎಂಬ ವ್ಯಕ್ತಿಯು, ಬಡ ಜನರು ಕೊರೆಯುವ ಚಳಿಯನ್ನು ನಿಭಾಯಿಸಲು ಸಹಾಯ ಮಾಡುವುದಕ್ಕಾಗಿ ಕಂಬಳಿ ವಿತರಿಸಿದ್ದಾರೆ. ತನಗಾಗಿ ಬಹಳ ಕಡಿಮೆ ಹಣವಿದ್ದರೂ, ರಾಜು ಅವರು ನಿರಾಶ್ರಿತರು ಮತ್ತು ನಿರ್ಗತಿಕರಿಗೆ ಸುಮಾರು 500 ಕಂಬಳಿಗಳನ್ನು ವಿತರಿಸಿದ್ದಾರೆ. ಅವರ ನಿಸ್ವಾರ್ಥ ಕಾರ್ಯವು ಅನೇಕರ ಹೃದಯಗಳನ್ನು ತಟ್ಟಿದೆ. ತನಗೆ ಕಷ್ಟವಿದ್ದರೂ ಮಾನವೀಯತೆ ತೋರಿದ ಅವರ ಕ್ರಮಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ರಾಜು ಅವರ ಸಮಾಜ ಸೇವೆ ಹೊಸದೇನಲ್ಲ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲೂ ಅವರು ಅನೇಕರಿಗೆ ನೆರವಾಗಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಜು ಅವರ ಮಾನವೀಯತೆಯ ಸಮರ್ಪಣೆಯನ್ನು ಶ್ಲಾಘಿಸಿದ್ದರು. ಸಹಾಯ ಮಾಡಲು ಶ್ರೀಮಂತರೇ ಆಗಬೇಕೆಂದಿಲ್ಲ ಎಂಬುದನ್ನು ರಾಜು ಅವರ ಮಾನವೀಯ ಕಾರ್ಯಗಳನ್ನು ನೋಡಿ ಕಲಿಯಬಹುದು.
ಕಂಬಳಿಗಳನ್ನು ಕೊಡುವುದಕ್ಕಾಗಿ ಸಣ್ಣ ಮೊತ್ತವನ್ನು ಭಿಕ್ಷೆ ಬೇಡಿದ್ದಾರೆ. ಕೆಲವೊಮ್ಮೆ ಕೇವಲ 10 ರೂ.ಗಳನ್ನು ಸಂಗ್ರಹಿಸುತ್ತಿದ್ದೆ ಎಂದು ಹೇಳಿದರು. ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡುವ ಕರ್ತವ್ಯವನ್ನು ದೇವರು ತನಗೆ ನೀಡಿದ್ದಾನೆ ಎಂದು ಅವರು ವಿನಮ್ರವಾಗಿ ಹೇಳಿದರು. ಇನ್ನು ರಾಜು ಅವರಿಗೆ ವಾಸಿಸಲು ಸ್ಥಳವಿಲ್ಲದ ಕಾರಣ, ಶಾಶ್ವತ ಮನೆಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸ್ಥಳೀಯ ನಿವಾಸಿಗಳು ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದು, ಸಮಾಜವು ಅವರಿಂದ ಕಲಿಯಬೇಕು ಮತ್ತು ಬಡವರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಹೇಳಿದ್ದಾರೆ.
