ಉದಯವಾಹಿನಿ: ಈಗಂತೂ ಚಳಿಗಾಲ. ಈ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸಿಕೊಂಡರಷ್ಟೇ ಆರೋಗ್ಯ ಉತ್ತಮವಾಗಿರುತ್ತದೆ. ಇದಕ್ಕಾಗಿ, ಹಣ್ಣುಗಳು, ತರಕಾರಿ-ಸೊಪ್ಪುಗಳನ್ನು ತಿನ್ನುವುದು ಮುಖ್ಯ. ಸದ್ಯ ಈಗ ಚಳಿಗಾಲದ ಹಿನ್ನೆಲೆ ಮಾರುಕಟ್ಟೆಗೆ ಸಾಕಷ್ಟು ರೀತಿಯ ಸೊಪ್ಪುಗಳು ಲಭ್ಯವಿದೆ. ಈ ಚಳಿಯಲ್ಲಿ ಸೊಪ್ಪಿನಿಂದ ಉಪ್ಸಾರು ಹಾಗೂ ಬಸ್ಸಾರಿಗೆ ಖಾರ ಬೆರೆಸಿ ಮುದ್ದೆಯೊಂದಿಗೆ ತಿನ್ನುವುದರಿಂದ ಸಿಗುವ ಖುಷಿಯೇ ಬೇರೆ. ಇವು ರುಚಿಕವಾಗಿರುವುದರಲ್ಲದೇ ದೇಹವನ್ನು ಬೆಚ್ಚಗಿರಿಸುವುದರೊಂದಿಗೆ ಆರೋಗ್ಯವನ್ನು ಸಹ ಕಾಪಾಡುತ್ತದೆ.
ಇವುಗಳನ್ನು ತಯಾರಿಸಲು ಮೆಂತ್ಯ, ಪಾಲಕ್, ಚಿಲ್ಲಕರವೆ ಸೊಪ್ಪು, ಸಬ್ಬಸಿಗೆ ಸೊಪ್ಪು, ಅರಿವೆ ಹೀಗೆ ನಾನಾ ರೀತಿಯ ಸೊಪ್ಪನ್ನು ಉಪಯೋಗಿಸಲಾಗುತ್ತದೆ. ಅವುಗಳ ಸುವಾಸನೆಯು ಅಡುಗೆಮನೆಗೆ ವಿಶಿಷ್ಟವಾದ ಪರಿಮಳವನ್ನು ನೀಡುತ್ತದೆ. ಇದಷ್ಟೇ ಅಲ್ಲದೇ ಈ ಸಮಯದಲ್ಲಿ ಸೊಪ್ಪಿನ ಪಲ್ಯ, ಗೊಜ್ಜು, ಕರಿ ಅಥವಾ ಪರಾಠಕ್ಕೆ ಸೇರಿಸಿ ಸೇವಿಸುವುದು ಸಹ ಆರೋಗ್ಯಕ್ಕೆ ಒಳ್ಳೆಯದು.
ಆದರೆ ಅನೇಕ ಗೃಹಿಣಿಯರಿಗೆ ಅಡುಗೆ ಮಾಡುವುದಕ್ಕಿಂತ ಈ ಸೊಪ್ಪುಗಳನ್ನು ಬಿಡಿಸಿ ಸ್ವಚ್ಛಗೊಳಿಸುವುದೇ ದೊಡ್ಡ ತಲೆನೋವಾಗಿದೆ. ಅದರಲ್ಲೂ ಮೆಂತ್ಯ ಸೊಪ್ಪನ್ನು ಬಿಡಿಸಿ, ಸ್ವಚ್ಛಗೊಳಿಸುವುದು ಕಷ್ಟವೆನಿಸುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ಲಭ್ಯವಿರುವ ಮೆಂತ್ಯ ಆಹಾರದ ಪರಿಮಳ ಹೆಚ್ಚಿಸಿ, ರುಚಿ ನೀಡುವುದಲ್ಲದೇ ಆರೋಗ್ಯಕ್ಕೂ ಸಹ ಉತ್ತಮ ಆಯ್ಕೆ ಆಗಿದೆ.
ಮೆಂತ್ಯವನ್ನು ಸ್ವಚ್ಛಗೊಳಿಸುವುದು ಅಂದುಕೊಂಡದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ತ್ರಾಸದಾಯಕವಾಗಿದೆ. ಮೆಂತ್ಯ ಸೊಪ್ಪಿನ ಕಾಂಡವನ್ನು ಕೀಳುವುದು, ಸೊಪ್ಪಿನಲ್ಲಿರುವ ಮರಳನ್ನು ಸ್ವಚ್ಛಗೊಳಿಸುವುದು ಮತ್ತು ಪದೇ ಪದೇ ಸೊಪ್ಪನ್ನು ತೊಳೆಯುವ ಮೂಲಕ ಎಲೆಗಳನ್ನು ಒಂದೊಂದಾಗಿ ಕೀಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
