ಉದಯವಾಹಿನಿ,: ಚಿತ್ರೋದ್ಯಮದಲ್ಲಿ ಕೋಮುವಾದದ ಪ್ರಭಾವ ಹೆಚ್ಚುತ್ತಿದೆ ಎಂಬ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆ‌ರ್. ರೆಹಮಾನ್ ಅವರ ಇತ್ತೀಚಿನ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ವಿರುದ್ಧ ವಿವಿಧ ಕಲಾವಿದರು ಹಾಗೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರನೌತ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ ಕಂಗನಾ, ರೆಹಮಾನ್ ಅವರ ಮಾತುಗಳನ್ನು ಕಠಿಣವಾಗಿ ಟೀಕಿಸಿದ್ದಾರೆ. “ನಾನು ಕೇಸರಿ ಪಕ್ಷವನ್ನು ಬೆಂಬಲಿಸುವ ಕಾರಣದಿಂದ ಚಿತ್ರರಂಗದಲ್ಲಿ ಸಾಕಷ್ಟು ತಾರತಮ್ಯ ಎದುರಿಸಿದ್ದೇನೆ. ಆದರೆ ನಿಮ್ಮಂತಹ ಪೂರ್ವಾಗ್ರಹ ಪೀಡಿತ ಹಾಗೂ ದ್ವೇಷಪೂರಿತ ವ್ಯಕ್ತಿಯನ್ನು ಎಂದಿಗೂ ಭೇಟಿ ಮಾಡಿಲ್ಲ’ ಎಂದು ಅವರು ಹೇಳಿದ್ದಾರೆ. ತಮ್ಮ ನಿರ್ದೇಶನದ ‘ಎಮರ್ಜೆನ್ಸಿ’ ಚಿತ್ರದ ಕಥೆಯನ್ನು ರೆಹಮಾನ್ ಅವರಿಗೆ ಹೇಳಲು ಬಯಸಿದ್ದರೂ, ಅವರನ್ನು ಭೇಟಿಯಾಗಲು ನಿರಾಕರಿಸಲಾಗಿದೆ ಎಂಬ ಆರೋಪವನ್ನೂ ಕಂಗನಾ ಮಾಡಿದ್ದಾರೆ.
‘ಎಮರ್ಜೆನ್ಸಿ’ ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ವಿರೋಧ ಪಕ್ಷದ ನಾಯಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದರೂ, ರೆಹಮಾನ್ ತಮ್ಮ ದ್ವೇಷದಿಂದ ಅದನ್ನು ಕಡೆಗಣಿಸಿದ್ದಾರೆ ಎಂದು ಕಂಗನಾ ಅಸಮಾಧಾನ ಹೊರಹಾಕಿದ್ದಾರೆ. “ನೀವು ನಿಮ್ಮ ದ್ವೇಷದಿಂದ ಕುರುಡರಾಗಿದ್ದೀರಿ. ನಾನು ನಿಮ್ಮ ಬಗ್ಗೆ ವಿಷಾದಿಸುತ್ತೇನೆ” ಎಂದು ತಮ್ಮ ಪೋಸ್ಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.
2025 ರಲ್ಲಿ ಬಿಡುಗಡೆಯಾದ ‘ಛಾವಾ’ ಚಿತ್ರದ ಬಗ್ಗೆ ರೆಹಮಾನ್ ಅವರ ಹೇಳಿಕೆಗಳಿಂದ ಈ ವಿವಾದ ಹುಟ್ಟಿಕೊಂಡಿದೆ. ‘ಛಾವಾ’ ಚಿತ್ರದ ಬಗ್ಗೆ ಮಾತನಾಡಿದ ಅವರು, ‘ವಿಭಜಿಸುವ ಸಿನಿಮಾ’ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!