ಉದಯವಾಹಿನಿ, ಹಾವೇರಿ: ಜಿಲ್ಲೆಯಲ್ಲಿ ಬಡಕುಟುಂಬಗಳು ಸೂರು ಇಲ್ಲದೇ ಜೀವಿಸುತ್ತಿವೆ. ಹಾವೇರಿಯ ನಾಗೇಂದ್ರನಮಟ್ಟಿಯ ಶಾಂತಿನಗರ ಬಸವೇಶ್ವರನಗರ ಬಸ್​ ನಿಲ್ದಾಣದ ಅಕ್ಕಪಕ್ಕದಲ್ಲಿ ಖಾಲಿ ನಿವೇಶನಗಳಲ್ಲಿ ವಿವಿಧ ಬಡಾವಣೆಗಳ ಖಾಲಿ ಜಾಗಗಳಲ್ಲಿ ಈ ಕುಟುಂಬಗಳು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿವೆ.

ಹೌದು.. ಇಂತಹ ಕುಟುಂಬಗಳಿಗೆ ಸೂರು ಕಲ್ಪಿಸಲು ಹಾವೇರಿ ನಗರಸಭೆ ಕಳೆದ 4 ವರ್ಷದ ಹಿಂದೆ ವಿವಿಧ ಆಶ್ರಯ ಯೋಜನೆಗಳಲ್ಲಿ ಅರ್ಜಿ ಆಹ್ವಾನಿಸಿತ್ತು. ಇದಕ್ಕಾಗಿ ಅರ್ಜಿಗಳನ್ನ ಅಹ್ವಾನಿಸಿ ನಿಜವಾಗಿ ಕಡುಬಡವರಿಗೆ ಮತ್ತು ಸೂರಿಲ್ಲದವರಿಗೆ ಮನೆ ನೀಡಲು ಹಾವೇರಿ ನಗರಸಭೆ ಯೋಜನೆ ರೂಪಿಸಿತ್ತು.

1,112 ಮನೆಗಳ ನಿರ್ಮಾಣಕ್ಕೆ ಮುಂದಾದ ನಗರಸಭೆ: ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ ಈ ಹಿಂದೆ ಸುಡುಗಾಡು ಸಿದ್ದರು ವಾಸಿಸುತ್ತಿದ್ದ ತಾತ್ಕಾಲಿಕ ತಗಡಿನ ಶೆಡ್‌ ಪ್ರದೇಶದಲ್ಲಿ ಸುಮಾರು 440 ಮನೆಗಳು ಮತ್ತು ಹಾವೇರಿ ಹೊರವಲಯದ ಉದಯನಗರದ ಬಳಿಯಲ್ಲಿ 770 ಮನೆಗಳ ನಿರ್ಮಾಣಕ್ಕೆ ಹಾವೇರಿ ನಗರಸಭೆ ಮುಂದಾಗಿತ್ತು. ಈ ಮನೆಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ನಗರಸಭೆಗೆ ಒಂದು ಲಕ್ಷ ರೂಪಾಯಿ ಹಣ ನೀಡಬೇಕು. ಅವರಿಗೆ ಸರ್ಕಾರದಿಂದ 2 ಲಕ್ಷ 28 ಸಾವಿರ ರೂಪಾಯಿ ಸಾಲ ಸೌಲಭ್ಯ ನೀಡಲಾಗುತ್ತದೆ. ಅದೇ ರೀತಿ ಸಾಮಾನ್ಯ ವರ್ಗದ ಜನರು ಸಹ ಒಂದು ಲಕ್ಷ ರೂಪಾಯಿ ಹಣ ಕಟ್ಟಬೇಕು ಅವರಿಗೆ 3 ಲಕ್ಷ 80 ಸಾವಿರ ರೂಪಾಯಿ ಸಾಲ ಸೌಲಭ್ಯ ಇರುತ್ತೆ. ಒಂದು ಮನೆಗೆ ಸರ್ಕಾರ 6 ಲಕ್ಷ 68 ಸಾವಿರ ರೂಪಾಯಿ ವೆಚ್ಚ ಮಾಡಿ ಮನೆ ಕಟ್ಟಿಸಿಕೊಡಲಾಗುತ್ತದೆ. ಮನೆಗಳ ನಿರ್ಮಾಣ ಕಾಮಗಾರಿ ಸಮರೋಪಾದಿಯಲ್ಲಿ ನಡೆದಿತ್ತು. ಆದರೆ, ಕಾರಣಾಂತರಗಳಿಂದ ನಾಲ್ಕು ವರ್ಷದಿಂದ ಮನೆಗಳ ನಿರ್ಮಾಣ ನಿಧಾನಗತಿಯಲ್ಲಿ ಸಾಗಿದೆ. ಪರಿಣಾಮ ಸ್ವಂತ ಸೂರಿನ ಕನಸು ಕಾಣುತ್ತಿರುವ ಬಡಕುಟುಂಬಗಳು ಮನೆಗಳಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿವೆ.

 

Leave a Reply

Your email address will not be published. Required fields are marked *

error: Content is protected !!