ಉದಯವಾಹಿನಿ, ಜೈಪುರ: ಇಬ್ಬರು ಕೊಲೆ ಆರೋಪಿಗಳು ಜೈಲಿನಲ್ಲಿ ಪರಸ್ಪರ ಪ್ರೀತಿಸಿ, ಮದುವೆಯಾಗಲು 15 ದಿನಗಳ ಪೆರೋಲ್ ಮೇಲೆ ಹೊರಗೆ ಬಂದಿದ್ದಾರೆ.
ಜೈಲಿನಲ್ಲಿ ಒಟ್ಟಿಗೆ ಇದ್ದಾಗಿನಿಂದ ಶುರುವಾದ ಪ್ರೇಮಕಥೆ ಈಗ ಮದುವೆಯ ಹೊಸ್ತಿಲಲ್ಲಿದೆ. ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಕೊಂದು ಜೈಲಲ್ಲಿರುವ ಮಹಿಳೆ ಮತ್ತು ಐದು ಜನರನ್ನು ಕೊಂದ ವ್ಯಕ್ತಿ ರಾಜಸ್ಥಾನದ ಅಲ್ವಾರ್ನಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು ಆಕೆಯ ನಿಶ್ಚಿತ ವರ ಹನುಮಾನ್ ಪ್ರಸಾದ್, ಅಲ್ವಾರ್ನ ಬರೋಡಮೇವ್ನಲ್ಲಿ ತಮ್ಮ ವಿವಾಹಕ್ಕಾಗಿ ರಾಜಸ್ಥಾನ ಹೈಕೋರ್ಟ್ನಿಂದ 15 ದಿನಗಳ ತುರ್ತು ಪೆರೋಲ್ಗಳನ್ನು ಪಡೆದಿದ್ದಾರೆ.
ಪ್ರಿಯಾ ಸೇಠ್ ಎಂಬಾಕೆ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವಕ ದುಶ್ಯಂತ್ ಶರ್ಮಾ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ನಂತರ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾಳೆ. ಸಂಗನೇರ್ ಓಪನ್ ಜೈಲಿನಲ್ಲಿ ಆಕೆ ಜೈಲುವಾಸ ಅನುಭವಿಸುತ್ತಿದ್ದಾಳೆ. ಆರು ತಿಂಗಳ ಹಿಂದೆ ಇದೇ ಜೈಲಿನಲ್ಲಿ ಪ್ರಸಾದ್ ಎಂಬಾತನ ಪರಿಚಯವಾಗಿ ಪರಸ್ಪರರು ಪ್ರೀತಿಸುತ್ತಿದ್ದಾರೆ.
ಕೊಲೆಗಾರ್ತಿ ಪ್ರಿಯಾ ಸೇಠ್: ಆಕೆಗೆ ಶಿಕ್ಷೆ ವಿಧಿಸಿದ ಕೊಲೆ ಪ್ರಕರಣವು 2018 ರ ಹಿಂದಿನದು. ಮೇ 2 ರಂದು ಸೇಠ್ ತನ್ನ ಪ್ರೇಮಿ ಮತ್ತು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಸಿಂಗ್ನನ್ನು ಹತ್ಯೆ ಮಾಡಿದ್ದಳು. ತನ್ನ ಲವ್ವರ್ ದೀಕ್ಷಾಂತ್ ಕಮ್ರಾ ಸಾಲ ತೀರಿಸಲು ಪ್ರಿಯಾ ಯೋಜಿಸಿದ್ದಳು. ಅದಕ್ಕಾಗಿ ಸಿಂಗ್ ಜೊತೆ ಸ್ನೇಹ ಬೆಳೆಸಿದಳು. ಸಿಂಗ್ನನ್ನು ಬಜಾಜ್ ನಗರದ ಫ್ಲಾಟ್ಗೆ ಕರೆಸಿಕೊಂಡು, ಆತನ ತಂದೆಗೆ ಕರೆ ಮಾಡಿ 10 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದಳು. ಸಿಂಗ್ ತಂದೆ 3 ಲಕ್ಷ ರೂ. ವ್ಯವಸ್ಥೆ ಮಾಡಿ ಕೊಟ್ಟರು. ಸಿಂಗ್ನನ್ನು ಬಿಟ್ಟರೆ ಪೊಲೀಸರಿಗೆ ನಮ್ಮನ್ನು ಹಿಡಿದುಕೊಡ್ತಾನೆ ಅಂತ ಹೆದರಿ ಪ್ರಿಯಾ ಸೇಠ್ ಮತ್ತು ಆಕೆಯ ಪ್ರಿಯಕರ ಇಬ್ಬರೂ ಸೇರಿ ಕೊಲೆ ಮಾಡಿದ್ದರು.
