ಉದಯವಾಹಿನಿ, ಮುಂಬೈ : ನಾವು ಖರೀದಿಸುವ ಆಹಾರ ವಸ್ತುಗಳ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಅದರಲ್ಲೂ ಆಹಾರ ಸುರಕ್ಷತೆ ಬಗ್ಗೆ ದಿನ ನಿತ್ಯ ಚರ್ಚೆಗಳು ನಡೆಯುತ್ತಲೇ ಇದೆ. ಇದರ ಬೆನ್ನಲ್ಲೇ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು ವ್ಯಾಪಾರಿಯೊಬ್ಬ ಹಣ್ಣುಗಳಿಗೆ ಚರಂಡಿ ನೀರು ಸಿಂಪಡಿಸುತ್ತಿದ್ದ ಘಟನೆ ನಡೆದಿದೆ. ಮುಂಬೈ ಸಮೀಪದ ವಿರಾರ್ ವೆಸ್ಟ್ನಲ್ಲಿ ಈ ದೃಶ್ಯ ನಡೆದಿದ್ದು ಮಾರಾಟ ಮಾಡಲು ಇಟ್ಟಿದ್ದ ಹಣ್ಣುಗಳ ಮೇಲೆ ವ್ಯಾಪಾರಿ ಚರಂಡಿಯ ಕೊಳಕು ನೀರನ್ನು ಸಿಂಪಡಿಸುತ್ತಿದ್ದ. ಸದ್ಯ ಇದನ್ನು ಗಮನಿಸಿದ ನೆರೆಹೊರೆಯವರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಣ್ಣುಗಳ ಮೇಲೆ ನೀರು ಚಿಮುಕಿಸುತ್ತಿದ್ದ ವ್ಯಾಪಾರಿಯನ್ನು ಅಲ್ಲಿದ್ದ ಸ್ಥಳೀಯರು ಗಮನಿಸಿದ್ದಾರೆ. ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕೊಳಕು ನೀರನ್ನು ಆತ ಹಣ್ಣುಗಳಿಗೆ ಬಳಸುತ್ತಿದ್ದ. ಇದನ್ನು ಕಂಡ ಸ್ಥಳೀಯರು ಆತನನ್ನು ಪ್ರಶ್ನಿಸಿದಾಗ ಇಲ್ಲ ಎಂದು ವಾದವನ್ನು ಕೂಡ ಮಾಡಿದ್ದು ಬಿಎಂಸಿ ನೀರು ಬಳಕೆ ಮಾಡಿದ್ದೇನೆ ಎಂದು ವಾದಿಸುತ್ತಾನೆ. ಆದರೆ ಸ್ಥಳೀಯರು ಅಲ್ಲೇ ಹತ್ತಿರದಲ್ಲಿದ್ದ ಕೊಳಕು ನೀರಿನ ಗುಂಡಿಯನ್ನು ತೋರಿಸಿದಾಗ ಆತನೇ ತಬ್ಬಿಬ್ಬಾಗಿದ್ದಾನೆ.
ಆ ವ್ಯಕ್ತಿ ಹಣ್ಣುಗಳಿಗೆ ಬಳಸುವ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಎಲ್ಲರ ಮುಂದೆ ಅದೇ ನೀರನ್ನು ಕುಡಿದು ತೋರಿಸಿದ್ದಾನೆ. ʼʼನಾನೇ ಕುಡಿದೆ ಎಂದಮೇಲೆ ಇದು ಗಲಿಜು ನೀರು ಹೇಗಾಗುತ್ತದೆ?” ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಅಲ್ಲಿನ ಜನರು ಇದಕ್ಕೆ ಅಕ್ಷೇಪ ವ್ಯಕತಪಡಿಸಿದಾಗ ತಾನು ಹಣ್ಣುಗಳ ಮೇಲೆ ಚರಂಡಿ ನೀರು ಸಿಂಪಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.ನಂತರ ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ವ್ಯಾಪಾರಿ ತಾನು ಮಾಡಿದ ತಪ್ಪಿಗೆ ಕಣ್ಣೀರು ಹಾಕಿದ್ದಾನೆ. ಆದರೆ ಜನರ ಆರೋಗ್ಯದ ಜತೆ ಆಟ ಆಡಿದ ಈತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹೆಚ್ಚಿನವರು ಆಗ್ರಹಿಸಿದ್ದಾರೆ.
