ಉದಯವಾಹಿನಿ, ಮೆಲ್ಬೋರ್ನ್: ಮಹಾತ್ಮ ಗಾಂಧೀಜಿಯವರ ಪ್ರತಿಮೆಯನ್ನು ಕತ್ತರಿಸಿ ಕದ್ದೊಯ್ದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಭಾರತ ಆಗ್ರಹಿಸಿದೆ. ಮೆಲ್ಬೋರ್ನ್ನ ರೌವಿಲ್ಲೆಯಲ್ಲಿನ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಕತ್ತರಿಸಿ ಕದ್ದೊಯ್ಯಲಾಗಿದೆ. ಇದು ಭಾರತೀಯ ಮತ್ತು ಆಸ್ಟ್ರೇಲಿಯನ್ ಸಮುದಾಯದಲ್ಲಿ ತೀವ್ರ ಕಳವಳವನ್ನು ಉಂಟು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನವದೆಹಲಿ, ಈ ಕುರಿತು ಆಸ್ಟ್ರೇಲಿಯಾದ ಅಧಿಕಾರಿಗಳೊಂದಿಗೆ ಔಪಚಾರಿಕವಾಗಿ ಚರ್ಚಿಸಲಾಗಿದೆ. ಪ್ರತಿಮೆಯನ್ನು ಮರಳಿ ಪಡೆಯಲು ಮತ್ತು ಆರೋಪಿಗಳನ್ನು ಗುರುತಿಸಲು ತಕ್ಷಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದು ಹೇಳಿದೆ.
ಮೆಲ್ಬೋರ್ನ್ನ ರೌವಿಲ್ಲೆಯಲ್ಲಿನ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್ನಲ್ಲಿರುವ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಕದ್ದೊಯ್ಯಲಾಗಿದೆ. ಇದು ಸ್ಥಳೀಯ ಪೊಲೀಸರು, ಭಾರತೀಯರು, ಆಸ್ಟ್ರೇಲಿಯನ್ ಸಮುದಾಯದಲ್ಲಿ ಕಳವಳವನ್ನು ಉಂಟು ಮಾಡಿದೆ. ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, ರೌವಿಲ್ಲೆಯಲ್ಲಿನ ಆಸ್ಟ್ರೇಲಿಯನ್ ಇಂಡಿಯನ್ ಕಮ್ಯುನಿಟಿ ಸೆಂಟರ್ನಲ್ಲಿದ್ದ ಗಾಂಧೀಜಿಯವರ ಪ್ರತಿಮೆಯನ್ನು ಅಪರಿಚಿತರು ಧ್ವಂಸಗೊಳಿಸಿ ತೆಗೆದು ಹಾಕಿರುವುದನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
