ಉದಯವಾಹಿನಿ, ಸೀಕರ್: ‘ರಾಜಸ್ಥಾನದಲ್ಲಿ ಈವರೆಗೂ ನಡೆದ ಹಲವು ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಉದ್ಯಮವೇ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ರಾಜ್ಯಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಯುವಕರ ಕನಸುಗಳು ಸಾಕಾರಗೊಳ್ಳಬೇಕೆಂದರೆ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಗುರಿಯಾಗಿಸಿ ವಾಗ್ದಾಳಿ ನಡೆಸಿದರು.ರಾಜಸ್ಥಾನ ಸರ್ಕಾರದಲ್ಲಿನ ಹಣಕಾಸು ಅವ್ಯವಹಾರ ಇರುವ ಡೈರಿ ಕುರಿತು ಮಾತನಾಡಿ, ಸಚಿವ ಸ್ಥಾನದಿಂದ ವಜಾಗೊಂಡ ರಾಜೇಂದ್ರ ಗುಡಾ ವಿವಾದವನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್‌ನ ಸುಳ್ಳಿನ ಅಂಗಡಿಯ ಹೊಸ ಉತ್ಪನ್ನ ‘ರೆಡ್‌ ಡೈರಿ” ಎಂದು ಆರೋಪಿಸಿದರು.’ಕಾಂಗ್ರೆಸ್‌ನ ಕರಾಳ ಬಯಕೆಗಳು ಈ ಡೈರಿಯೊಳಗೆ ದಾಖಲಾಗಿವೆ. ಈ ಡೈರಿಯನ್ನು ಇತ್ತೀಚೆಗೆ ಗುಡಾ ಅವರು ವಿಧಾನಸಭೆಯಲ್ಲಿ ಹಾಜರುಪಡಿಸಿದ್ದರು. ಅದರಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಹಣಕಾಸು ಅವ್ಯವಹಾರ ನಡೆಸಿರುವ ಎಲ್ಲಾ ಮಾಹಿತಿ ಇದೆ ಎಂದಿದ್ದರು. ಈ ಎಲ್ಲಾ ಅವ್ಯವಹಾರಗಳನ್ನು ಜನರ ಮುಂದಿಟ್ಟು ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪರಾಭವಗೊಳಿಸಲಾಗುವುದು’ ಎಂದು ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!