ಉದಯವಾಹಿನಿ, ಬೆಂಗಳೂರು : ಗ್ರಾಮಾಂತರ ) ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ. ಸತ್ಯವರ ಗ್ರಾಮದ ಸಮೀಪ ಇಂದು ಶುಕ್ರವಾರ ಬೆಳಗ್ಗೆ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕಾರಿನಲ್ಲಿದ್ದ ಆರು ಮಂದಿ ಹಾಗೂ ಓರ್ವ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ.
ಈ ದುರ್ಘಟನೆ ಹೊಸಕೋಟೆ– ದಾಬಸ್ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕ್ಯಾಂಟರ್ ವಾಹನ, ಬೈಕ್ ಹಾಗೂ ಮಹೀಂದ್ರಾ ಎಕ್ಸ್ಯುವಿ 700 ಕಾರಿನ ನಡುವೆ ಸಂಭವಿಸಿದ ಸರಣಿ ಡಿಕ್ಕಿಯಿಂದ ಈ ಅಪಘಾತ ಸಂಭವಿಸಿದೆ.
ಅಪಘಾತದ ಭೀಕರತೆಯನ್ನು ಸ್ಥಳದಲ್ಲಿನ ಚಿತ್ರಣಗಳೇ ಬಿಚ್ಚಿಡುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಅತೀವೇಗವಾಗಿ ಚಲಿಸುತ್ತಿದ್ದ ಎಕ್ಸ್ಯುವಿ 700 ಕಾರು ಮೊದಲು ಕಾರಿನಿಂದ ಮುಂದೆ ಸಾಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆ ಮೇಲೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ನಂತರ ನಿಯಂತ್ರಣ ತಪ್ಪಿದ ಕಾರು ಎದುರಿನಿಂದ ಬರುತ್ತಿದ್ದ ಕ್ಯಾಂಟರ್ ವಾಹನಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
