ಉದಯವಾಹಿನಿ, ದಿಸ್ಪುರ : ಶಿಕ್ಷಣಕ್ಕಿಂತಲೂ ಕ್ರಿಯಾಶೀಲತೆವೊಂದಿದ್ದರೆ ಏನನ್ನು ಸಾಧಿಸಬಹುದು ಎನ್ನುವ ಮಾತಿದೆ. ಅದಕ್ಕೆ ಸೂಕ್ತ ಉದಾಹರಣೆ ಈ ಘಟನೆ. ಇಲ್ಲೊಬ್ಬ ಕಲಾವಿದನ ಕೈ ಚಳಕ ಎಲ್ಲರನ್ನು ಆಕರ್ಷಿಸಿದೆ. ಗೌವಾಹಟಿ ವಿಶ್ವವಿದ್ಯಾನಿಲಯದ ಹಾನಿಗೊಳಗಾದ ಗೋಡೆಯನ್ನು ಕಲಾವಿದನೊಬ್ಬ ಬೆರಗುಗೊಳಿಸುವ ಜಿಂಕೆಯ ಭಿತ್ತಿ ಚಿತ್ರವನ್ನಾಗಿ ಪರಿವರ್ತಿಸಿದ್ದು ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕಲಾಕೃತಿಯ ಬಗ್ಗೆನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲಾವಿದ ಭೇಜಾಲ್ ಎನ್ನುವ ಯುವಕ ಈ ಚಿತ್ರವನ್ನು ರಚಿಸಿದ್ದಾನೆ.
ಗುವಾಹಟಿ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಬಿರುಕು ಬಿಟ್ಟಿದ್ದ ಹಳೆಯ ಗೋಡೆಯೊಂದು ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಯುವಕ ಭೇಜಾಲ್ ತಮ್ಮ ಅದ್ಭುತ ಕಲೆಯ ಮೂಲಕ ಹಾಳಾಗಿದ್ದ ಗೋಡೆಯನ್ನು ಸುಂದರವಾದ ಜಿಂಕೆಯ ಭಿತ್ತಿಚಿತ್ರವನ್ನಾಗಿ ಪರಿವರ್ತಿಸಿದ್ದಾನೆ. ಗೋಡೆಯ ನಡುವೆ ಬೆಳೆದಿದ್ದ ಬಿರುಕುಗಳನ್ನು ಮುಚ್ಚುವ ಬದಲು ಅವುಗಳನ್ನೇ ಚಿತ್ರವನ್ನಾಗಿಸಿದ್ದಾನೆ.
ಒಂದು ಕಾಲದಲ್ಲಿ ಈ ಕ್ಯಾಂಪಸ್ ಅನ್ನು ಮೂಲ ಸೌಕರ್ಯದ ಕೊರತೆಯಿಂದ ಯಾರು ಗಮನಿಸುವವರೇ ಇರಲಿಲ್ಲ. ಆದರೆ ಇದೀಗ ಯುವಕನ ಕೈಚಳಕದಿಂದ ಎಲ್ಲರೂ ಕಣ್ಣು ಹಾಯಿಸುವಂತಾಗಿದೆ. ಸ್ಪ್ರೇ ಪೇಂಟ್ ಬಳಸಿ, ಕಲಾವಿದ ಬಿರುಕು ಬಿದ್ದ ಗೋಡೆಯ ಉದ್ದಕ್ಕೂ ಜಿಂಕೆಯ ರೂಪವನ್ನು ನೀಡಿದ್ದಾನೆ. ಗೋಡೆಯಿಂದ ಹೊರಬಂದಿದ್ದ ಮರದ ಕೊಂಬೆಗಳನ್ನೆ ಜಿಂಕೆಯ ಕೊಂಬುಗಳನ್ನಾಗಿ ಮಾಡಿದ್ದು ನೈಜವಾಗಿ ಮೂಡಿಬಂದಿದೆ.
