ಉದಯವಾಹಿನಿ, ಪಾಟ್ನಾ (ಬಿಹಾರ): 3 ಲಕ್ಷ ರೂ ಬಹುಮಾನ ಘೋಷಿತ ಮಾವೋವಾದಿ ಸುರೇಶ್​ ಕೊಡಾ ಅಲಿಯಾಸ್​ ಮುಸ್ತಕಿಮ್​ ಶರಣಾಗುವ ಮೂಲಕ ಬಿಹಾರ ರಾಜ್ಯ ನಕ್ಸಲ್​ ಮುಕ್ತವಾಗಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಪ್ರಕಟಿಸಿರುವ ಪೊಲೀಸ್​ ಮುಖ್ಯ ಕಚೇರಿ, ಯುಎಪಿಎ ಸೇರಿದಂತೆ 60 ಪ್ರಕರಣಗಳನ್ನು ಹೊಂದಿದ್ದ ಕೊಡಾ, ಮುಂಗೇರ್‌​ ಜಿಲ್ಲೆಯ ಸ್ಪೆಷಲ್​ ಟಾಸ್ಕ್​ ಫೋರ್ಸ್​ ಮುಂದೆ ಶರಣಾಗತನಾಗಿದ್ದಾನೆ. ತನ್ನ ಬಳಿ ಇದ್ದ ಮೂರು ರೈಫಲ್​, ನೂರಾರು ಮದ್ದುಗುಂಡು ಮತ್ತು ಮ್ಯಾಗಜೀನ್​ ಹಾಗೂ ಸ್ವಲ್ಪ ಹಣವನ್ನು ಆತ ಪೊಲೀಸರಿಗೆ ಒಪ್ಪಿಸಿದ್ದಾನೆ ಎಂದು ತಿಳಿಸಿದ್ದಾರೆ.
ಶರಣಾಗಿರುವ ಕೊಡಾಗೆ ಆತ್ಮಸಮರ್ಪಣೆ ಶಾ ಪುನರ್ವಾಸ ಯೋಜನೆ ಅಡಿ ಎಲ್ಲಾ ಪ್ರಯೋಜನಗಳನ್ನು ನೀಡಲಾಗುವುದು. ಮಾವೋಗಳ ಶರಣಾಗತಿ ಮತ್ತು ಪುನರ್ವಸತಿಗೆ ಈ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅಡಿ ಈತನ ತಲೆಗೆ ಘೋಷಿಸಿದ್ದ ಬಹುಮಾನದಷ್ಟೇ ಮೊತ್ತವನ್ನು ಪುನರ್ವಸತಿ ಯೋಜನೆ ಭಾಗವಾಗಿ 3 ಲಕ್ಷ ರೂ ಹಣ ಪಡೆಯುತ್ತಾನೆ. ಇದರ ಜೊತೆಗೆ 5 ಲಕ್ಷ ಪ್ರೋತ್ಸಾಹಧನ ಮತ್ತು 36 ತಿಂಗಳ ಕಾಲ 10 ಸಾವಿರ ಸ್ಟೈಫಂಡ್​ ಹಣ ಪಡೆಯಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕೊಡಾ ಶರಣಾಗತಿಯೊಂದಿಗೆ ಬಿಹಾರದಲ್ಲಿನ ನಕ್ಸಲ್​ ತಾಣಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಪೊಲೀಸರು ತಿಳಿಸಿದ್ದು, ರಾಜ್ಯವು ನಕ್ಸಲ್​ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ.

2012ರಲ್ಲಿ ಬಿಹಾರದ 23 ಜಿಲ್ಲೆಗಳಲ್ಲಿ ನಕ್ಸಲ್​ ಚಟುವಟಿಕೆ ವಿಪರೀತವಾಗಿತ್ತು. 1970ರ ಸುಮಾರಿನಲ್ಲಿ ಬಿಹಾರದಲ್ಲಿ ಮಾವೋವಾದಿಗಳ ಪ್ರಭಾವ ಗಮನಾರ್ಹವಾಗಿ ಬೆಳವಣಿಗೆ ಕಾಣಲಾರಂಭಿಸಿತು. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುಸ್ಥಿರ ಪ್ರಯತ್ನದಿಂದಾಗಿ 2025 ರಲ್ಲಿ ಯಾವುದೇ ಒಂದು ನಕ್ಸಲ್​ ಘಟನೆಗಳು ವರದಿಯಾಗಿರಲಿಲ್ಲ. 220 ನಕ್ಸಲರನ್ನು ಬಂಧಿಸಲಾಗಿತ್ತು. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರ ಪರಿಣಾಮ ರಾಜ್ಯವು ನಕ್ಸಲ್​ ಮುಕ್ತವಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!