ಉದಯವಾಹಿನಿ, ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಆರಂಭಿಕ ಮೂರೂ ಪಂದ್ಯಗಳಲ್ಲಿ ಹ್ಯಾಟ್ರಿಕ್‌ ಡಕ್‌ಔಟ್ ಆಗಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ , ಫೆಬ್ರವರಿ 26 ರಂದು ನಡೆದಿದ್ದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕವನ್ನು ಬಾರಿಸಿದ್ದರು. ಆ ಮೂಲಕ ಎಡಗೂ ಬ್ಯಾಟ್ಸ್‌ಮನ್‌ ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಚೊಚ್ಚಲ ಅರ್ಧಶತಕದ ಜೊತೆಗೆ ತಮ್ಮ ಬ್ಯಾಟಿಂಗ್‌ ಫಾರ್ಮ್‌ಗೆ ಮರಳಿದರು. ಇದರ ಜೊತೆಗೆ ಭಾರತ ತಂಡದ 72 ರನ್‌ಗಳ ಗೆಲುವು ಪಡೆದು ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಇದರ ಬೆನ್ನಲ್ಲೆ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ತಮ್ಮ ಶಿಷ್ಯ ಅಭಿಷೇಕ್‌ ಶರ್ಮಾಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಕಳೆದ ದ್ವಿಪಕ್ಷೀಯ ಟಿ20ಐ ಸರಣಿಯಲ್ಲಿ ಅಭಿಷೇಕ್‌ ಶರ್ಮಾ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಇದರೊಂದಿಗೆ ಅದ್ಭುತ ಫಾರ್ಮ್‌ನೊಂದಿಗೆ ಚುಟುಕು ವಿಶ್ವಕಪ್‌ಗೆ ಬಂದಿದ್ದ ಅಭಿಷೇಕ್‌, ಆರಂಭಿಕ ಮೂರೂ ಪಂದ್ಯಗಳಲಿ ಡಕ್‌ಔಟ್‌ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್‌-8ರ ಪಂದ್ಯದಲ್ಲಿ 15 ರನ್‌ ಗಳಿಸಿ ಔಟ್‌ ಆಗಿದ್ದರು. ಈ ಹಿನ್ನೆಲೆಯಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಎಡಗೈ ಬ್ಯಾಟ್ಸ್‌ಮನ್‌ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆದರೆ, ಜಿಂಬಾಬ್ವೆ ಪಂದ್ಯದಲ್ಲಿ 30 ಎಸೆತಗಳಲ್ಲಿ 55 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಭರ್ಜರಿ ಫಾರ್ಮ್‌ಗೆ ಮರಳಿ ಟೀಕಾಕಾರರಿಗೆ ತಿರುಗೇಟು ನೀಡಿದರು.

ಇದರ ಬನ್ನೆಲ್ಲೆ ಯುವರಾಜ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂದೇಶವನ್ನು ಹಂಚಿಕೊಂಡಿದ್ದಾರೆ. “ನಿಮ್ಮ ಬ್ಯಾಟ್ ಮಾತನಾಡಲು ಬಿಟ್ಟಾಗ ಅತ್ಯುತ್ತಮ ಸಂಭಾಷಣೆಗಳು ನಡೆಯುತ್ತವೆ! ತುಂಬಾ ಒಳ್ಳೆಯ ಇನಿಂಗ್ಸ್ ಸರ್ ಅಭಿಷೇಕ್, ಅದನ್ನು ಮುಂದುವರಿಸಿ.” ಎಂದು ಯುವರಾಜ್‌ ಸಿಂಗ್‌ ಬರೆದುಕೊಂಡಿದ್ದಾರೆ.ಯುವರಾಜ್ ಸಿಂಗ್‌, ಅಭಿಷೇಕ್‌ ಶರ್ಮಾಗೆ ಮಾರ್ಗದರ್ಶನವನ್ನು ನೀಡಿದ್ದಾರೆ ಮತ್ತು ಟೂರ್ನಿಯಲ್ಲಿ ಅತ್ಯಂತ ನಿರ್ಣಾಯಕ ಹಂತದಲ್ಲಿ ಅವರ ರನ್‌ಗಳು ಅವರ ಮೇಲಿನ ಅವರ ನಂಬಿಕೆಗೆ ಸಾಕ್ಷಿಯಾಗಿದೆ. ಇದಲ್ಲದೆ, ಜಿಂಬಾಬ್ವೆ ವಿರುದ್ಧದ ಪಂದ್ಯದ ನಂತರ ಅಭಿಷೇಕ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಾಗ, ಯುವರಾಜ್ ಸಿಂಗ್ ಚಪ್ಪಲಿ ಎಮೋಜಿಯೊಂದಿಗೆ ಪೋಸ್ಟ್‌ಗೆ ಕಾಮೆಂಟ್ ಹಾಕಿದ್ದಾರೆ. ಅಭಿಷೇಕ್ ಶರ್ಮಾ ಅವರ ಪ್ರದರ್ಶನದಿಂದ ಯುವರಾಜ್ ಇನ್ನೂ ಸಂಪೂರ್ಣವಾಗಿ ಸಂತೋಷಗೊಂಡಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.

Leave a Reply

Your email address will not be published. Required fields are marked *

error: Content is protected !!