ಉದಯವಾಹಿನಿ, ಬಾಗಲಕೋಟೆ: ಸತ್ತಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ ಬದುಕಿ ಮತ್ತೆ ಮಾತನಾಡಿರುವ ಅಚ್ಚರಿ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಮೊಮಿನ್ ಗಲ್ಲಿಯ ನಿವಾಸಿ 65 ವರ್ಷದ ಮುಬಾರಕ್ ಅವಟಿ ಅನಾರೋಗ್ಯದ ಹಿನ್ನೆಲೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.
ಬಳಿಕ ಕುಟುಂಬದವರು ಅಂತಿಮ ಸಂಸ್ಕಾರಕ್ಕಾಗಿ ಊರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಲೋಕಾಪುರ ಬಳಿ ರೋಡ್ ಹಂಪ್ಸ್ ಬರುತ್ತಿದ್ದತೆ ವಾಹನ ಅಲುಗಾಡಿದೆ. ಆಗ ಮುಬಾರಕ್ ಹಠಾತ್ ಉಸಿರಾಡಲು ಆರಂಭಿಸಿ, ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ. ಸದ್ಯ ಮುಬಾರಕ್ಗೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಬಾರಕ್ ಅವಟಿ ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದ ಕುಟುಂಬಸ್ಥರು ಹಠಾತ್ ಮಾತನಾಡಿದ್ದನ್ನ ಕಂಡು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ಘಟನೆ ಜಮಖಂಡಿ ಭಾಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
