ಉದಯವಾಹಿನಿ, ಬೆಂಗಳೂರು: ಹೊರ ರಾಜ್ಯದಿಂದ ಬರುವ ಅಕ್ರಮ ಮದ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಬೋಸರಾಜು ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆ ಕೇಳಿದರು. ಅಬಕಾರಿ ಇಲಾಖೆಯಲ್ಲಿ ಈ ವರ್ಷ ಟಾರ್ಗೆಟ್ ರೀಚ್ ಆಗಿಲ್ಲ. ಕುಡುಕರು ಕಡಿಮೆ ಆಗಿದ್ದಾರೆ ಅಂದುಕೊಂಡಿದ್ದೆ. ಆದರೆ ನಕಲಿ ಮದ್ಯ, ಗೋವಾದಿಂದ ಅಕ್ರಮವಾಗಿ ಮದ್ಯ ಬರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಟಾರ್ಗೆಟ್ ರೀಚ್ ಆಗಿಲ್ಲ. ಬೇರೆ ರಾಜ್ಯದಿಂದ ಅಕ್ರಮ ಮದ್ಯ ಬರುತ್ತಿರುವ ಬಗ್ಗೆ ಕ್ರಮ ಆಗಬೇಕು. ಗಡಿಭಾಗದಲ್ಲಿ ಇಂತಹ ಅಕ್ರಮ ಜಾಸ್ತಿ ಆಗುತ್ತಿದೆ. ಅಬಕಾರಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ಟಾಸ್ಕ್ ಫೋರ್ಸ್ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಬೇಕು ಎಂದು ಒತ್ತಾಯ ಮಾಡಿದರು.
ಸಚಿವ ತಿಮ್ಮಾಪುರ್ ಬದಲಾಗಿ ಸಭಾ ನಾಯಕ ಬೋಸರಾಜು ಉತ್ತರ ನೀಡಿ, ಏಪ್ರಿಲ್ 2025ರಿಂದ ಜನವರಿ 2026ರಲ್ಲಿ ಅಬಕಾರಿಯಿಂದ 33,370.54 ಕೋಟಿ ಸಂಗ್ರಹ ಆಗಿದೆ. ಫೆಬ್ರವರಿ ಅಂತ್ಯಕ್ಕೆ 36,492.47 ಕೋಟಿ ಸಂಗ್ರಹ ಆಗಿದೆ. 0.51% ಆದಾಯ ಸಂಗ್ರಹ ಕಡಿಮೆ ಆಗಿದೆ. ಈ ವರ್ಷ ಮದ್ಯ ಮಾರಾಟ ಕುಸಿತ ಆಗಿದೆ. ಮಳೆ, ಚಳಿ ಜಾಸ್ತಿ ಆದ್ದರಿಂದ ಬಿಯರ್ ಮಾರಾಟ ಕಡಿಮೆ ಆಗಿದೆ ಎಂದು ಮಾಹಿತಿ ಕೊಟ್ಟರು.
ಆಂಧ್ರ ಪ್ರದೇಶದಲ್ಲಿ ಅಬಕಾರಿ ನಿಯಮ ಬದಲಾವಣೆ ಮಾಡಿ ಮದ್ಯದ ಬೆಲೆ ಕಡಿಮೆ ಮಾಡಿದ್ದರು. ಅಲ್ಲಿಂದ ಮದ್ಯ ಜಾಸ್ತಿ ಬರಲಾಯಿತು. ಹೀಗಾಗಿ ನಮ್ಮಲ್ಲಿ ಮದ್ಯ ಕಡಿಮೆ ಮಾರಾಟ ಆಗಿದೆ. ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮವಹಿಸಲಾಗಿದೆ. ಡಿಸಿಗಳಿಗೆ ಜವಾಬ್ದಾರಿ ಕೊಟ್ಟು ಕ್ರಮ ಮಾಡಲಾಗಿದೆ ಎಂದು ತಿಳಿಸಿದರು.
