ಉದಯವಾಹಿನಿ, ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರಾಗಿ ಇಂದು ಆರ್.ಎನ್.ರವಿ ಅವರು ಪ್ರಮಾಣವಚನ ಸ್ವೀಕರಿಸಿದರು. ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಿದರು.

ರಾಜ್ಯಪಾಲರ ಪ್ರಮಾಣವಚನ ಸಮಾರಂಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ: ನೂತನ ರಾಜ್ಯಪಾಲರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಪಸ್ಥಿತರಿದ್ದರು. ಆಡಳಿತದ ಉನ್ನತ ಅಧಿಕಾರಿಗಳ ಜೊತೆಗೆ, ಪ್ರಮುಖ ರಾಜಕೀಯ ನಾಯಕರು ಸಹ ಹೊಸ ರಾಜ್ಯಪಾಲರನ್ನು ಸ್ವಾಗತಿಸಿದರು. ಎಡರಂಗ ಪಕ್ಷದ ಹಿರಿಯ ನಾಯಕಿ ಬಿಮನ್ ಬಸು ಅವರೂ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಪರವಾಗಿ ಅನಿರ್ಬನ್ ಗಂಗೋಪಾಧ್ಯಾಯ ಹಾಜರಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸೌಜನ್ಯದ ವಾತಾವರಣದಲ್ಲಿ ಹೊಸ ರಾಜ್ಯಪಾಲರನ್ನು ಸ್ವಾಗತಿಸಲಾಯಿತು. ರಾಜ್ಯಪಾಲರ ಚಹಾಕೂಟದಲ್ಲಿ ಭಾಗವಹಿಸದ ಸಿಎಂ; ಪ್ರಮಾಣವಚನ ಸಮಾರಂಭದ ಬಳಿಕ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಕುಟುಂಬವು ರಾಜ್ಯಪಾಲ ಆರ್.ಎನ್.ರವಿ ಅವರನ್ನು ಭೇಟಿ ಮಾಡಿ ಗೌರವ ಸಲ್ಲಿಸಿ ಅಭಿನಂದಿಸಿತು. ಆದರೆ, ಮುಖ್ಯಮಂತ್ರಿಗಳು ಸಮಾರಂಭದ ಬಳಿಕದ ಚಹಾಕೂಟದಲ್ಲಿ ಭಾಗವಹಿಸಲಿಲ್ಲ. ಸಭೆಯ ಬಳಿಕ ಲೋಕ ಭವನದಿಂದ ಹೊರಟರು.

ನೂತನ ರಾಜ್ಯಪಾಲರಾದ ರವೀಂದ್ರ ನಾರಾಯಣ್ ರವಿ ಅವರು ಅದಕ್ಕೂ ಮೊದಲು ತಮಿಳುನಾಡು, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಐಪಿಎಸ್ ಅಧಿಕಾರಿ ಆರ್.ಎನ್. ರವಿ ಅವರಿಗೆ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಕೆಲಸ ಮಾಡಿದ ಅನುಭವವೂ ಇದೆ.

ಹಲವು ವಿವಾದದಲ್ಲಿ ಸಿಲುಕಿರುವ ರಾಜ್ಯಪಾಲರು: ತಮಿಳುನಾಡಿನ ರಾಜ್ಯಪಾಲರಾಗಿದ್ದ ಆರ್.ಎನ್.ರವಿ ಅವರು ತಮಿಳು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸರ್ಕಾರದೊಂದಿಗೆ ಹಲವಾರು ಬಾರಿ ಸಂಘರ್ಷಕ್ಕೆ ಸಿಲುಕಿದ್ದರು. ತಮಿಳು ನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾದ ವಿವಿಧ ಮಸೂದೆಗಳಿಗೆ ಒಪ್ಪಿಗೆ ನೀಡದಿದ್ದಕ್ಕಾಗಿ, ಸಿಎಂ ಸ್ಟಾಲಿನ್, ರಾಜ್ಯಪಾಲ ರವಿ ಅವರನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಪಾಲರ ವಿರುದ್ಧ ಪ್ರಕರಣವನ್ನು ಕೂಡಾ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!