ಉದಯವಾಹಿನಿ, ಶ್ರೀನಗರ: ಬಂದೂಕುಧಾರಿಯೊಬ್ಬ ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನಿಸಿದ ಘಟನೆ ಜಮ್ಮುವಿನ ವಿವಾಹ ಸಮಾರಂಭದಲ್ಲಿ ನಡೆದಿದೆ. ಫಾರೂಕ್ ಅಬ್ದುಲ್ಲಾ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
63 ವರ್ಷದ ಕಮಲ್ ಸಿಂಗ್ ಎಂದು ಗುರುತಿಸಲಾದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾರನ್ನು ಕೊಲ್ಲಲು ಪ್ಲ್ಯಾನ್ ಮಾಡುತ್ತಿದ್ದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಮೂಲಗಳ ಪ್ರಕಾರ, ಆರೋಪಿಯು ಜಮ್ಮುವಿನ ಹಳೆಯ ಭಾಗದಲ್ಲಿ ಕೆಲವು ಅಂಗಡಿಗಳನ್ನು ಹೊಂದಿದ್ದು, ತನ್ನ ಅಂಗಡಿಗಳಿಂದ ಬದುಕು ಸಾಗಿಸುತ್ತಿದ್ದ. ಫಾರೂಕ್ ಅಬ್ದುಲ್ಲಾ ಅವರು ಪ್ರತಿಕ್ರಿಯಿಸಿ, ದೇವರು ನನ್ನನ್ನು ಉಳಿಸಿದ, ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.
ಪುತ್ರ, ಸಿಎಂ ಒಮರ್ ಅಬ್ದುಲ್ಲಾ ಎನ್ಎಸ್ಜಿ ಟೀಂ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ದೇವರ ದಯೆಯಿಂದ ನನ್ನ ತಂದೆ ಅಪಾಯದಿಂದ ಪಾರಾಗಿದ್ದು, ದಾಳಿ ಏಕೆ ನಡೆದಿದೆ ಎಂದು ಗೊತ್ತಿಲ್ಲ. ಝೆಡ್ ಪ್ಲಸ್, ಎನ್ಎಸ್ಜಿ ಮಧ್ಯೆಯೂ ಹೇಗೆ ದಾಳಿ ಆಯಿತು ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು, ಫಾರೂಕ್ ಅಬ್ದುಲ್ಲಾ ಹತ್ಯೆ ಯತ್ನ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿದೆ. ಕಾಶ್ಮೀರದ ಜಾತ್ಯಾತೀತ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಭದ್ರತೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸಭಾನಾಯಕ ನಡ್ಡಾ, ಈ ವಿಚಾರದಲ್ಲಿ ರಾಜಕಾರಣ ಎಳೆದು ತರಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದಿದ್ದಾರೆ.
