ಉದಯವಾಹಿನಿ, ಎರ್ನಾಕುಲಂ(ಕೇರಳ): ತ್ರಿಶೂರ್​​​ನಿಂದ ತಿರುವನಂತಪುರಂಗೆ ಪ್ರಯಾಣಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಸ್ವಿಫ್ಟ್ ಬಸ್ ನಿಗದಿತ ನಿಲ್ದಾಣದಲ್ಲಿ ನಿಲ್ಲದೇ ತೆರಳಿದ್ದರಿಂದ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಕೆಲಕಾಲ ಪರದಾಡಿದ ಘಟನೆ ಪೆರುಂಬವೂರ್ ಬಸ್ ನಿಲ್ದಾಣದಲ್ಲಿ ನಡೆದಿದೆ.ಡಿಪೋದಲ್ಲಿ ಪ್ರಯಾಣಿಕರು ಮತ್ತು ಸ್ಥಳೀಯರ ಪ್ರತಿಭಟನೆಯ ನಂತರ, ಸುಮಾರು ನಲವತ್ತು ಕಿಲೋ ಮೀಟರ್ ಪ್ರಯಾಣಿಸಿದ್ದ ಬಸ್ ವಾಪಸ್​ ನಿಗದಿತ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಕರೆದೊಯ್ದಿದೆ. ಏಳು ಮಹಿಳೆಯರು ಸೇರಿದಂತೆ 10ಕ್ಕೂ ಹೆಚ್ಚು ಪ್ರಯಾಣಿಕರು ಮುಂಗಡ ಟಿಕೆಟ್​ ಬುಕಿಂಗ್‌ ಮಾಡಿ ಬೆಳಗಿನ ಜಾವ ಒಂದು ಗಂಟೆಯ ಸುಮಾರಿಗೆ ಬಸ್​ಗಾಗಿ ಕಾಯುತ್ತಿದ್ದರು. ಆದರೆ ಬಸ್​​ ನಿಲ್ದಾಣಕ್ಕೆ ಬಾರದೇ ಬೈಪಾಸ್ ಮೂಲಕ ನೇರವಾಗಿ ಎಂಸಿ ರಸ್ತೆ ಮೂಲಕ ಸಾಗಿದೆ. ನಿಗದಿತ ಸಮಯಕ್ಕೆ ಬಸ್​ ಬಾರದಿದ್ದಾಗ ಕೋಪಗೊಂಡ ಪ್ರಯಾಣಿಕರು ಡಿಪೋ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಬಸ್​ ನಿಲ್ದಾಣಕ್ಕೆ ಬಾರದೇ ಮುಂದೆ ಸಾಗಿದೆ ಎಂದು ಗೊತ್ತಾಗಿದೆ. ಬಳಿಕ ಪ್ರಯಾಣಿಕರು ಫೋನ್ ಮೂಲಕ ಬಸ್ ಸಿಬ್ಬಂದಿಯನ್ನು ಸಂರ್ಪಕಿಸಿ, ವಾಪಸ್​ ಬಂದು ತಮ್ಮನ್ನು ಕರೆದೊಯ್ಯುವಂತೆ ಕೋರಿದ್ದಾರೆ. ಸಿಬ್ಬಂದಿ ಬಸ್​ ತಿರುಗಿಸಲು ನಿರಾಕರಿಸಿದ್ದಾರೆ.

ಸಿಬ್ಬಂದಿಯ ಬೇಜವಾಬ್ದಾರಿ ಪ್ರತಿಕ್ರಿಯೆಯಿಂದ ಆಕ್ರೋಶಗೊಂಡ ಪ್ರಯಾಣಿಕರು ಮತ್ತು ಸ್ಥಳೀಯರು ಡಿಪೋ ನೌಕರರನ್ನು ಸುತ್ತುವರೆದು ಪ್ರತಿಭಟಿಸಿದ್ದಾರೆ. ಬಳಿಕ ಡಿಪೋ ಅಧಿಕಾರಿಗಳು ಚಾಲಕ ಮತ್ತು ಕಂಡಕ್ಟರ್​ನನ್ನು ಸಂಪರ್ಕಿಸಿ, ತಕ್ಷಣ ವಾಪಸ್​ ಬಂದು ಪ್ರಯಾಣಿಕರನ್ನು ಕರೆದೊಯ್ಯುವಂತೆ ಆದೇಶಿಸಿದ್ದಾರೆ. ಆ ಹೊತ್ತಿಗೆ, ಬಸ್ ಪೆರುಂಬವೂರಿನಿಂದ ನಲವತ್ತು ಕಿಲೋಮೀಟರ್ ದೂರದಲ್ಲಿರುವ ಮುವಾಟ್ಟುಪುಳವನ್ನೂ ದಾಟಿತ್ತು. ನಂತರ ಬಸ್​​ 40ಕ್ಕೂ ಹೆಚ್ಚು ದೂರದಿಂದ ವಾಪಸ್​ ನಿಲ್ದಾಣಕ್ಕೆ ಬಂದಿದೆ. ಈ ವೇಳೆ ಸಿಬ್ಬಂದಿ ಮತ್ತು ಸ್ಥಳೀಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಸಿಬ್ಬಂದಿ ತಡರಾತ್ರಿ ಪ್ರಯಾಣಿಕರನ್ನು, ಅದರಲ್ಲೂ ಮಹಿಳೆಯರನ್ನು ಬಿಟ್ಟು ತೆರಳಿದ್ದಕ್ಕಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಬೈಪಾಸ್ ರೈಡರ್ ಸೇವೆಗಳಿಗೆ ಮಾತ್ರ ಬಸ್ ನಿಲ್ದಾಣಗಳನ್ನು ಪ್ರವೇಶಿಸದೆ ಅವುಗಳನ್ನು ಬಿಟ್ಟು ಹೋಗಲು ಅಧಿಕಾರವಿದೆ ಎಂದು ಪ್ರಯಾಣಿಕರು ಗಮನಿಸಿದರು. ಆದಾಗ್ಯೂ, ಹಲವಾರು ಇತರ ಸ್ವಿಫ್ಟ್ ಬಸ್‌ಗಳು ಆಗಾಗ್ಗೆ ಇದೇ ರೀತಿಯಾಗಿ ನಿಲ್ದಾಣಗಳನ್ನು ಬೈಪಾಸ್ ಮಾಡುತ್ತವೆ ಎಂದು ಪ್ರಯಾಣಿಕರು ಆರೋಪಿಸುತ್ತಾರೆ, ಇದರಿಂದಾಗಿ ಪೆರುಂಬವೂರ್‌ನಲ್ಲಿ ಪ್ರಯಾಣಿಕರು ಹಿಂದೆ ಉಳಿಯುವ ಸಂದರ್ಭಗಳು ಸಾಮಾನ್ಯವಾಗಿದೆ. ರಾಜ್ಯ ಸರ್ಕಾರವು ಕೆಎಸ್‌ಆರ್‌ಟಿಸಿಯನ್ನು ಆಧುನೀಕರಿಸಲು ಪ್ರಮುಖ ಯೋಜನೆಗಳನ್ನು ಜಾರಿಗೆ ತರುತ್ತಿರುವ ಸಮಯದಲ್ಲಿ, ಸಿಬ್ಬಂದಿಯ ಈ ಸ್ಪಷ್ಟ ನಿರ್ಲಕ್ಷ್ಯವು ಬಂದಿದೆ, ಇದು ಅಂತಿಮವಾಗಿ ಸಾರಿಗೆ ನಿಗಮಗಳ ಪ್ರತಿಷ್ಠೆಯನ್ನು ಹಾಳು ಮಾಡುತ್ತದೆ.ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳು ಈ ರೀತಿ ಘಟನೆ ಮರುಕಳಿಸದಂತೆ ಸಾರಿಗೆ ಇಲಾಖೆ ಮತ್ತು ಹಿರಿಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಮತ್ತು ತಪ್ಪು ಮಾಡಿದ ಸಿಬ್ಬಂದಿ ಮತ್ತು ಡಿಪೋ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!