ಉದಯವಾಹಿನಿ, ಶ್ರೀನಗರ: ಸೈಬರ್ ವಂಚನೆಯಿಂದ ಸಂಕಷ್ಟಕ್ಕೆ ಸಿಲುಕಿ ಗಡಿ ಕಾಯುವ ಯೋಧ ಪರದಾಡುವಂತಾಗಿದೆ. ಇದೀಗ ಅಕೌಂಟ್ ಅನ್ಫ್ರೀಜ್ ಮಾಡುವಂತೆ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಯೋಧ ಸುರೇಂದ್ರ ಚೌದರಿ ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಬೆಂಗಳೂರು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ತಾವು ಜಮ್ಮು ಕಾಶ್ಮೀರದ ರಿಮೋಟ್ ಕಂಟ್ರೋಲ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದು, ಈ ಮೊದಲು ಸೈಬರ್ ವಂಚನೆ ಸಂಬಂಧ ಅಕೌಂಟ್ನ್ನು ಫ್ರೀಜ್ ಮಾಡಲಾಗಿತ್ತು. ಇದೀಗ ಅನ್ಫ್ರೀಜ್ ಮಾಡಲು ಸೂಕ್ತ ದಾಖಲೆಗಳನ್ನು ತರುವಂತೆ ಉತ್ತರ ವಿಭಾಗದ ಸೆನ್ ಪೊಲೀಸರು ಮೆಸೇಜ್ ಮಾಡಿದ್ದಾರೆ. ಆದರೆ ಇದೀಗ ಕೆಲಸ ಬಿಟ್ಟು ಬರೋಕೆ ಆಗ್ತಿಲ್ಲ, ದಯವಿಟ್ಟು ಅಕೌಂಟ್ ಅನ್ಫ್ರೀಜ್ ಮಾಡಿ ಎಂದು ಕೋರಿದ್ದಾರೆ.
ಅಕೌಂಟ್ ಫ್ರೀಜ್ ಮಾಡಿರುವದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ನನ್ನ ಸಂಬಳವನ್ನೇ ನಂಬಿಕೊಂಡು ನನ್ನ ಕುಟುಂಬ ಜೀವನ ಮಾಡ್ತಿದೆ. ಪ್ರತಿ ತಿಂಗಳು ಸಂಬಳ ಆಗುತ್ತಿದ್ದಂತೆ ಮನೆಗೆ ಹಣ ಕಳುಹಿಸಬೇಕು. ಹಲವು ಇಎಂಐಗಳು ಇದಾವೆ, ಈಗ ಏನು ಮಾಡೋಕೆ ಆಗ್ತಿಲ್ಲ. ಒಂದು ಕಡೆ ಇಎಂಐ ಕಟ್ಟಿಲ್ಲ ಅಂತ ಬ್ಯಾಂಕ್ನಿಂದ ಕರೆಗಳು ಬರ್ತಿವೆ. ಈಕಡೆ ನಾನು ಯಾವುದೇ ಸೈಬರ್ ವಂಚಕರ ಜೊತೆ ಸಂಪರ್ಕ ಇಲ್ಲ. ಆದ್ರೂ ನನ್ನ ಅಕೌಂಟ್ ಫ್ರೀಜ್ ಮಾಡಲಾಗಿದೆ, ದಯವಿಟ್ಟು ಅನ್ ಪ್ರೀಜ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ಟ್ವೀಟ್ನ್ನು ಪರಿಗಣನೆಗೆ ತೆಗೆದುಕೊಂಡಿರುವ ಬೆಂಗಳೂರು ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸೋದಾಗಿ ಭರವಸೆ ನೀಡಿದ್ದಾರೆ.
