ಉದಯವಾಹಿನಿ, ಚಂಡೀಗಢ: ರಾಜ್ಯ ಉಗ್ರಾಣ ನಿಗಮದ ಅಧಿಕಾರಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪಂಜಾಬ್ ಮಾಜಿ ಸಚಿವ, ಎಎಪಿ (AAP) ಶಾಸಕ ಲಾಲ್ಜಿತ್ ಸಿಂಗ್ ಭುಲ್ಲರ್ ಅವರನ್ನು ಬಂಧಿಸಲಾಗಿದೆ. ಅಮೃತಸರದಲ್ಲಿರುವ ರಾಜ್ಯ ಉಗ್ರಾಣ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಗಗನ್ದೀಪ್ ಸಿಂಗ್ ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮೊದಲು ವೀಡಿಯೋ ಮಾಡಿದ್ದ ಗಗನ್ದೀಪ್, ಲಾಲ್ಜಿತ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆರೋಪಿಸಿದ್ದರು.
ಈ ಆರೋಪ ಬೆನ್ನಲ್ಲೇ ಸಿಎಂ ಭಗವಂತ್ ಮಾನ್ ಸೂಚನೆಯಂತೆ ಲಾಲ್ಜಿತ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಲಾಲ್ಜಿತ್, ಅವರ ತಂದೆ ಸುಖ್ದೇವ್ ಸಿಂಗ್ ಭುಲ್ಲರ್ ಮತ್ತು ಆಪ್ತ ಸಹಾಯಕ ದಿಲ್ಬಾಗ್ ಸಿಂಗ್ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೇ 24 ಗಂಟೆಯೊಳಗೆ ಲಾಲ್ಜಿತ್ ಅವರನ್ನು ಅರೆಸ್ಟ್ ಮಾಡುವಂತೆ ಮೃತ ಗಗನ್ದೀಪ್ ಕುಟುಂಬಸ್ಥರು ಆಗ್ರಹಿಸಿದ್ದರು.
