ಉದಯವಾಹಿನಿ, ನಟಿ ಮೇಘನಾ ರಾಜ್ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ಚಿರಂಜೀವಿ ಸರ್ಜಾ ನಿಧನದ ಬಳಿಕ ಅವರು ಸಖತ್ ನೋವು ಅನುಭವಿಸಿದರು. ಪುತ್ರ ರಾಯನ್ ಜನಿಸಿದ ಬಳಿಕ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಯಿತು. ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಆ ಬಗ್ಗೆ ಮೇಘನಾ ರಾಜ್ ಅವರು ಮಾತನಾಡಿದ್ದಾರೆ. ‘ರೆಯಾನ್ ಮಿಥುನ್’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಖಾಸಗಿ ಜೀವನದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಸಿಂಗಲ್ ಪೇರೆಂಟ್ ಆಗಿದ್ದಾಗ ಕಷ್ಟಗಳು ಡಬಲ್ ಆಗಿರುತ್ತವೆ. ಅದರಲ್ಲೂ ತಾಯಿಯಾಗಿ ಮತ್ತು ಸೆಲೆಬ್ರಿಟಿಯಾಗಿದ್ದಾಗ 10 ಪಟ್ಟು ಜಾಸ್ತಿ ಕಷ್ಟ ಆಗುತ್ತದೆ. ಆ ಮಗುವಿನ ಮೇಲೂ ಜನರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ರಾಯನ್ ಹುಡುಗ ಆದ ಕಾರಣ ಆತನ ಜೀವನದಲ್ಲಿ ತಂದೆಯ ರೀತಿ ಮೇಲ್ ಫಿಗರ್ ಇರಬೇಕಾದ್ದು ತುಂಬಾ ಮುಖ್ಯ. ಈಗ ಅವನಿಗೆ 5 ವರ್ಷ ಆಗುತ್ತಿದೆ. ಅವನ ಚಟುವಟಿಕೆಗಳು ಬದಲಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ನಾನು ಸಿಂಗಲ್ ಪೇರೆಂಟ್ ಎಂಬುದು ನನಗೆ ಹೆಚ್ಚು ಫೀಲ್ ಆಗುತ್ತಿದೆ’ ಎಂದಿದ್ದಾರೆ ಮೇಘನಾ ರಾಜ್.
ಈ ಮೊದಲು ನಾನು ಇದನ್ನು ನಿಭಾಯಿಸಬಲ್ಲೆ ಎನಿಸಿತ್ತು. ಆದರೆ ಪ್ರತಿದಿನವೂ ನಿಭಾಯಿಸುವುದು ಕಷ್ಟ. ಸಾಕಪ್ಪ ಎನಿಸಿದ ದಿನಗಳು ಕೂಡ ಇವೆ. ಕೆಲವು ದಿನ ಅವನ ಎನರ್ಜಿ ನನ್ನ ಎನರ್ಜಿಗೆ ಹೊಂದಿಕೆ ಆಗಲ್ಲ. ನನ್ನ ಒಬ್ಬಳು ಕಸಿನ್ ಕೂಡ ಸಿಂಗಲ್ ಪೇರೆಂಟ್ ಪಾಲನೆಯಲ್ಲಿ ಬೆಳೆದವಳು. ಆಕೆಯ ಬಳಿ ಹೋಗಿ ನಾನು ಅನುಭವ ಕೇಳಿದೆ. ಸಾಕಷ್ಟು ವಿಷಯ ಚರ್ಚೆ ಮಾಡಿದೆವು. ‘ನೀನು ತಾಯಿ. ಒಳ್ಳೆಯ ತಾಯಿ ಆಗುವುದರ ಕಡೆಗೆ ಮಾತ್ರ ಗಮನ ಹರಿಸು. ತಂದೆ ಆಗಲು ಪ್ರಯತ್ನಿಸಬೇಡ. ಅದರ ಅವಶ್ಯಕತೆ ಕೂಡ ಇಲ್ಲ’ ಅಂತ ಆಕೆ ನನಗೆ ಸಲಹೆ ನೀಡಿದಳು. ನಾನು ಆ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡೆ. ಅದರಿಂದ ನನಗೆ ಬಹಳ ಅನುಕೂಲ ಆಯಿತು. ಕೆಲವು ದಿನ ನನಗೆ ಕಷ್ಟ ಆಗುತ್ತದೆ. ಆಗ ರಾಯನ್ ಜೀವನದಲ್ಲಿ ಫಾದರ್ ಫಿಗರ್ ಖಂಡಿತವಾಗಿಯೂ ಬೇಕು ಎನಿಸುತ್ತದೆ’ ಎಂದು ಮೇಘನಾ ರಾಜ್ ಹೇಳಿದ್ದಾರೆ.
