ಉದಯವಾಹಿನಿ, ʻಬಂತಲ್ಲ ಬೇಸಗೆ, ಕೆಟ್ಟ ಬಿಸಿಲುʼ ಎಂದು ಗೊಣಗುವವರಿಗೆ ಬೇಸಗೆಯ ಹಣ್ಣುಗಳ ಪರಿಚಯ ಇದೆಯೋ ಇಲ್ಲವೋ? ಕಲ್ಲಂಗಡಿ, ದ್ರಾಕ್ಷಿಯಿಂದ ಹಿಡಿದು ಕರಬೂಜ, ಮಾವಿನ ಹಣ್ಣುಗಳವರೆಗೆ, ಬಳಲುವ ಶರೀರಗಳ ದಾಹ ತಣಿಸಲೋ ಎಂಬಂತೆ ನಿಸರ್ಗವೇ ಮಾಡಿಕೊಟ್ಟ ಅನುಕೂಲವಿದು. ಕರಬೂಜಕ್ಕೆ  ಮಧುಫಲ ಎಂಬ ಹೆಸರೂ ಇದೆ. ಕಲ್ಲಂಗಡಿ, ಕುಂಬಳಕಾಯಿಗಳ ಜಾತಿಗೆ ಸೇರಿದ ಈ ಹಣ್ಣು ಮೊದಲಿಗೆ ಪಶ್ಚಿಮ ಏಷ್ಯಾ ದೇಶಗಳ ಬೆಳೆ ಯಾಗಿದ್ದರೂ, ನಂತರದ ವರ್ಷಗಳಲ್ಲಿ ಬ್ರೆಜಿಲ್‌, ಅಮೆರಿಕಾ ಮತ್ತು ಏಷ್ಯಾದ ಹಲವಾರು ಭಾಗಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಭಾರತದಲ್ಲೂ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಏನಿವೆ ಇದನ್ನು ತಿನ್ನುವುದರ ಲಾಭಗಳು ಎಂಬುದನ್ನು ನೋಡೋಣ.

ಪೌಷ್ಟಿಕಾಂಶಗಳು ಏನಿವೆ?: ವಿಟಮಿನ್‌ ಸಿ ಹೆಚ್ಚಿನ ಪ್ರಮಾಣದಲ್ಲಿರುವ ಫಲವಿದು. ಬೇಸಗೆಯಲ್ಲಿ ದಾಳಿ ಇಡಬಹುದಾದ ರೋಗಗಳನ್ನು ದೂರ ಇರಿಸುವುದಕ್ಕೆ ಅಗತ್ಯವಾದ ರಕ್ಷಾಕವಚನ್ನು ಸಿ ಜೀವಸತ್ವ ಒದಗಿಸುತ್ತದೆ. ಜೊತೆಗೆ, ಕಣ್ಣು, ಕೂದಲು ಮತ್ತು ಚರ್ಮಗಳ ಸ್ವಾಸ್ಥ್ಯಕ್ಕೆ ಬೇಕಾದ ವಿಟಮಿನ್‌ ಎ ಸಹ ಹೇರಳವಾಗಿದೆ. ಇದರಲ್ಲಿರುವ ಗ್ಯಾಲಿಕ್‌ ಆಮ್ಲ, ಎಲಾಜಿಕ್‌ ಆಮ್ಲದಂಥ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಕೋಶಗಳ ಹಾನಿಯನ್ನು ತಡೆದು, ಶರೀರವನ್ನು ಪುನರುಜ್ಜೀವನ ಗೊಳಿಸುತ್ತವೆ. ರಕ್ತನಾಳಗಳನ್ನು ಸಡಿಲಿಸಿ, ರಕ್ತ ಪರಿಚಲನೆಯನ್ನು ಚುರುಕುಗೊಳಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕರಬೂಜದ ಹಣ್ಣನ್ನು ಇದ್ದಂತೆಯೇ ಅಥವಾ ಪಾನಕ, ಸಲಾಡ್‌ ಇತ್ಯಾದಿ ಯಾವುದೇ ರೀತಿಯಲ್ಲಿ ಸೇವಿಸುವುದು ಸೂಕ್ತ.

ಬಹೂಪಯೋಗಿ ಹಣ್ಣು: ಮಾನಸಿಕ ಒತ್ತಡವನ್ನು ಕಳೆದು ದೇಹ ಮತ್ತು ಮನಸ್ಸಿಗೆ ತಂಪೆರೆಯುವ ಸಾಮರ್ಥ್ಯ ಇದಕ್ಕಿದೆ. ಜೊತೆಗೆ, ಇದರಲ್ಲಿರುವ ಪೊಟಾಶಿಯಂನಂಥ ಖನಿಜಗಳು ನಿದ್ದೆಯನ್ನು ಉದ್ದೀಪಿಸುವ ಗುಣ ಹೊಂದಿವೆ. ಅಧಿಕ ನೀರಿನಂಶದಿಂದ ದೇಹದ ಬಳಲಿಕೆಯನ್ನೂ ದೂರ ಮಾಡಿ, ಕಣ್ತುಂಬಾ ನಿದ್ದೆ ಬರಿಸುತ್ತದೆ. ಇದರಲ್ಲಿರುವ ವಿಟಮಿನ್‌ ಎ ಅಂಶವು ದೃಷ್ಟಿಯನ್ನು ಚುರುಕು ಗೊಳಿಸಿ, ಕಣ್ಣನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಈ ಹಣ್ಣಿನ ಪ್ರಖರ ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳು ಹೆಚ್ಚಿನ ಕೆರೋಟಿನಾಯ್ಡ್‌ಗಳಿರುವ ಸಂಕೇತ. ಈ ಅಂಶ ಹೆಚ್ಚಿದ್ದಷ್ಟೂ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಉದರ ಸಂಬಂಧೀ ಸಮಸ್ಯೆಗಳಿಗೂ ಇದು ಮದ್ದು. ಅಜೀರ್ಣದ ಸಮಸ್ಯೆಗಳನ್ನು ದೂರ ಮಾಡಿ, ಅಸಿಡಿಟಿಯನ್ನು ಹತೋಟಿಯಲ್ಲಿ ಇರಿಸುತ್ತದೆ. ಮಾತ್ರವಲ್ಲ, ನಿಯಮಿತ ಸೇವನೆಯಿಂದ ಹೊಟ್ಟೆ ಹುಣ್ಣು ಮತ್ತು ಮಲಬದ್ಧತೆಗೂ ಉಪಶಮನ ನೀಡುತ್ತದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನಾರಿನ ಅಂಶದಿಂದಾಗಿ ಸಹಜ ವಿರೇಚಕದಂತೆ ಕೆಲಸ ಮಾಡಿ, ಹೊಟ್ಟೆಯನ್ನು ಸ್ವಚ್ಛ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!