ಉದಯವಾಹಿನಿ, ಪಾಟ್ನಾ: ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಹಿನ್ನೆಲೆ ರೈಲ್ವೆ ಇಲಾಖೆ ಐಆರ್ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ.
2026ರ ಮಾರ್ಚ್ 15ರಂದು ಪಾಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಿತೇಶ್ ಕುಮಾರ್ ಸಿಂಗ್ ಎಂಬ ಪ್ರಯಾಣಿಕರಿಗೆ ರಾತ್ರಿಯ ಊಟದ ಸಮಯದಲ್ಲಿ ಮೊಸರು ಮತ್ತು ದಾಲ್ ನೀಡಲಾಗಿತ್ತು. ಆ ಮೊಸರಿನ ಕಪ್ ತೆರೆದಾಗ ಅದರಲ್ಲಿ ಜೀವಂತ ಹುಳುಗಳು ಹರಿದಾಡುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಅವರು ಈ ಬಗ್ಗೆ ರೈಲಿನಲ್ಲಿದ್ದ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಪ್ರಯಾಣಿಕರು ಹುಳುಗಳನ್ನು ತೋರಿಸಿದಾಗ, ಅಲ್ಲಿನ ಸಿಬ್ಬಂದಿ ಅದನ್ನು ಒಪ್ಪಿಕೊಳ್ಳದೇ ಅದು ಹುಳುಗಳಲ್ಲ, ‘ಕೇಸರಿ’ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು, ಹುಳುಗಳು ಜೀವಂತವಾಗಿ ಚಲಿಸುತ್ತಿರುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಪಾಸಣೆಯ ವೇಳೆ ಆ ಮೊಸರು ಈಗಾಗಲೇ ಅವಧಿ ಮೀರಿರುವುದು ಕೂಡ ಪತ್ತೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ರೈಲ್ವೆ ಸಚಿವಾಲಯ ಎಚ್ಚೆತ್ತುಕೊಂಡು ಪ್ರಯಾಣಿಕರ ಸುರಕ್ಷತೆ ಮತ್ತು ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದೆ. ಆಹಾರದ ಮೇಲ್ವಿಚಾರಣೆಯಲ್ಲಿ ವೈಫಲ್ಯ ಕಂಡಿದ್ದಕ್ಕಾಗಿ ಐಆರ್ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ರೈಲಿಗೆ ಆಹಾರ ಸರಬರಾಜು ಮಾಡುತ್ತಿದ್ದ ಖಾಸಗಿ ಸಂಸ್ಥೆಗೆ ಬರೋಬ್ಬರಿ 50 ಲಕ್ಷ ರೂ. ದಂಡ ಕೂಡ ವಿಧಿಸಿದೆ. ದೊಡ್ಡ ಮಟ್ಟದ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಆಹಾರ ಸರಬರಾಜು ಸಂಸ್ಥೆಯ ಗುತ್ತಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲು ಆದೇಶಿಸಲಾಗಿದೆ.
