ಉದಯವಾಹಿನಿ, ಪೆದ್ದಪಲ್ಲಿ (ಆಂಧ್ರ ಪ್ರದೇಶ): ಸಾಧನೆಗೆ ಬೇಕಿರುವುದು ಕಠಿಣ ಪರಿಶ್ರಮ, ದೃಢ ಸಂಕಲ್ಪ, ಆತ್ಮಸ್ಥೈರ್ಯಕ್ಕೆ ಸ್ಪೂರ್ತಿಯ ನೆಲೆಯ ಹಲವು ಕಥೆಗಳು, ಮಂಥನಿಯಲ್ಲಿನ ಜೆನ್ಟಿಯು ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೇಳಿ ಬರುತ್ತಿವೆ. ಪೋಷಕರ ತ್ಯಾಗ, ಮಕ್ಕಳ ಸಾಧನೆಯ ದಾರಿ ಇಂದು ದೊಡ್ಡ ಕನಸನ್ನು ನನಸು ಮಾಡಿದೆ. ಸಾಮಾನ್ಯ ಕೃಷಿಕರು, ಕುಂಬಾರರು, ನೇಕಾರರು ಮತ್ತು ದಿನಗೂಲಿ ಕಾರ್ಮಿಕರ ಮಕ್ಕಳು ಪದವಿ ಮುಗಿಯುವ ಮುನ್ನವೇ ಪ್ರತಿಷ್ಠಿತ ಕಂಪನಿಗಳಲ್ಲಿ ವಾರ್ಷಿಕ 5 ರಿಂದ 6 ಲಕ್ಷ ರೂಪಾಯಿಯ ವೇತನ ಪಡೆಯುವಂತೆ ಮಾಡಿದೆ.
ರಾಮಗಿರಿ ಮಂಡಲ್ನ ಪನ್ನೂರು ಗ್ರಾಮದಲ್ಲಿರುವ ಈ ಕಾಲೇಜಿನಲ್ಲಿ ಒಟ್ಟು 28 ವಿದ್ಯಾರ್ಥಿಗಳು ಇಂದು ಕ್ಯಾಂಪಸ್ ಆಯ್ಕೆಯಲ್ಲಿ ಉತ್ತಮ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವಂತೆ ಆಗಿದೆ. ಅವರ ಸಮರ್ಪಣಾ ಮನೋಭಾವಗಳು ಕಷ್ಟದ ಸಮಯವನ್ನು ದಾಟಿ ಸಾಧನೆಗಳು ಸಾಧ್ಯ ಎಂಬುದನ್ನು ಸಾರುತ್ತಿದೆ. ಇದು ಕೇವಲ ಈ ವಿದ್ಯಾರ್ಥಿಗಳ ಕಥೆಯಲ್ಲ, ಇದು ಪೋಷಕರಿಗೆ ಸಿಕ್ಕ ಗೌರವ, ಮಕ್ಕಳ ಶಿಕ್ಷಣಕ್ಕೆ ಅವರು ನಿರಂತರವಾಗಿ ಪಟ್ಟ ಕಷ್ಟದ ಫಲ.
ಪೋಷಕರ ತ್ಯಾಗ ನಾನು ನೀಡಿದ ಕಾಣಿಕೆ: ಈ ಕುರಿತು ತಮ್ಮ ಅನುಭವ ಹಂಚಿಕೊಂಡ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಓದುತ್ತಿರುವ ವರಂಗಲ್ ಜಿಲ್ಲೆಯ ಪೈದಿಪ್ಪಲಿಯ ಅಕುಲ್ ಸಂದೀಪ್, ನನ್ನ ತಂದೆ ಕುಂಬಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕಷ್ಟದ ನಡುವೆ ನನಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿದರು. ಇದರ ಪರಿಣಾಮವಾಗಿ 10ನೇ ತರಗತಿಯಲ್ಲಿ ನಾನು 10 ಜಿಪಿಎ ಪಡೆದೆ. ಜೊತೆಗೆ ಇಂಟರ್ಮೀಡಿಯೇಟ್ನಲ್ಲಿ ಇಎಂಸಿಇಟಿ 15,507 ರ್ಯಾಂಕಿಂಗ್ ಗಳಿಸಿದೆ. ಈ ಉದ್ಯೋಗವು ನನ್ನ ಪೋಷಕರ ತ್ಯಾಗಕ್ಕೆ ನಾನು ನೀಡಿದ ಕಾಣಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದು ನನ್ನ ಕುಟುಂಬಕ್ಕೆ ತಂದ ಹೆಮ್ಮೆಯ ಕ್ಷಣ: ರಾಜಣ್ಣ ಸಿರ್ಸಿಲಾ ಜಿಲ್ಲೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿರುವ ಮಂತ್ರಿ ವೈಷ್ಣವಿ ಮಾತನಾಡಿ, ನನ್ನ ತಂದೆ ನೇಕಾರರಾಗಿದ್ದು, ಅವರ ಕಷ್ಟ ನನ್ನನ್ನು ಚೆನ್ನಾಗಿ ಓದಬೇಕು ಎಂದು ಹುರಿದುಂಬಿಸಿತು. ಹೀಗಾಗಿ ಶಿಕ್ಷಣದ ಮೇಲೆ ಗಮನಹರಿಸಿ 10ನೇ ತರಗತಿಯಲ್ಲಿ 9.0 ಜಿಪಿಎ ಸ್ಕೋರ್ ಮಾಡಿದ್ದು, ಇದೀಗ ವಾರ್ಷಿಕ 5 ಲಕ್ಷದ ಉದ್ಯೋಗ ಗಳಿಸಿದ್ದೇನೆ. ಇದು ನನ್ನ ಕುಟುಂಬಕ್ಕೆ ಹೆಮ್ಮೆ ತಂದ ಕ್ಷಣವಾಗಿದೆ ಎಂದರು.
ಪೆದ್ದಪಲ್ಲಿಯ ಕೃಷಿಕರ ಕುಟುಂಬದ ಕಾವ್ಯಾಶ್ರೀ ಮಾತನಾಡಿ, ಆರ್ಥಿಕ ಸಮಸ್ಯೆ ಕಾರಣದಿಂದಾಗಿ ನಾನು ಸರ್ಕಾರಿ ಶಾಲೆಯಲ್ಲಿ ಓದಿದೆ. ಆದರೆ, ನನಗೆ ಗುರಿ ಸ್ಪಷ್ಟವಾಗಿದ್ದು, ಉದ್ಯೋಗ ಪಡೆದು ನನ್ನ ಕುಟುಂಬದ ಕಷ್ಟವನ್ನು ನೀಗಿಸುವುದು ನನ್ನ ಗುರಿಯಾಗಿದ್ದು, ಇಂದು ಅದು ಸಾಧ್ಯವಾಗಿದೆ.
