ಉದಯವಾಹಿನಿ, ಚಂಡೀಗಢ: ವೇಗವಾಗಿ ಬಂದ ಥಾರ್ ಡಿಕ್ಕಿ ಹೊಡೆದ ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ಅಜ್ಜ ಮತ್ತು ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿರುವ ಘಟನೆ ಗುರುಗ್ರಾಮದ ಪಟೌಡಿಯ ಖೋಡ್ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಜಾಯೆದ್ ಖಾನ್ (8), ಇಶಾಂತ್ (10) ಸ್ಥಳದಲ್ಲೇ ಮೃತಪಟ್ಟರೇ, ಅಜ್ಜ ಸುಭಾಷ್ (60) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ರಾಜಸ್ಥಾನದ ಭಿವಾಡಿಯ ಮಿಲ್ಕ್ಪುರ್ ಗ್ರಾಮದವರು ಎಂದು ತಿಳಿದುಬಂದಿದೆ. ಸುಭಾಷ್ ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ತನ್ನ ಸಹೋದರರನ್ನು ಭೇಟಿ ಮಾಡಲು ಖೋಡ್ ಗ್ರಾಮದ ಬಳಿಯ ಲೋಕ್ರಾ ರಸ್ತೆಗೆ ಬಂದಿದ್ದರು. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ, ಇಬ್ಬರು ಮೊಮ್ಮಕ್ಕಳೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ, ಮಹೀಂದ್ರಾ ಥಾರ್ ಕಾರು ಹಿಂದಿನಿಂದ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮೂವರು ಸ್ವಲ್ಪ ದೂರಕ್ಕೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಪಟೌಡಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೂವರ ಮೃತದೇಹಗಳನ್ನು ಶವಾಗಾರಕ್ಕೆ ಕಳುಹಿಸಿದ್ದಾರೆ. ಅಪಘಾತದ ನಂತರ ಥಾರ್ ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತವೆಸಗಿದ ಗುರುಗ್ರಾಮ್ನ ಗೋರಿಯಾವಾಸ್ ಗ್ರಾಮದ ನಿವಾಸಿ ದೀಪಾಂಶುನನ್ನು (25) ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
