ಉದಯವಾಹಿನಿ, ಚೆನ್ನೈ(ತಮಿಳುನಾಡು): ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಇಂದು ಬಿಡುಗಡೆ ಮಾಡಿದರು. ನುಂಗಂಬಾಕ್ಕಂನ ಸ್ಟಾರ್ ಹೋಟೆಲ್ನಲ್ಲಿ ವಿಜಯ್, ಒಂದೇ ಹಂತದಲ್ಲಿ ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದರು. ವಿಜಯ್ (ಸಿ.ಜೋಸೆಫ್ ವಿಜಯ್) ಚೆನ್ನೈನ ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಡಿಎಂಕೆ ಅಧ್ಯಕ್ಷ ಹಾಗೂ ಸಿಎಂ ಎಂ.ಕೆ.ಸ್ಟಾಲಿನ್ ಸ್ಪರ್ಧಿಸುತ್ತಿರುವ ಕೊಳತ್ತೂರು ಕ್ಷೇತ್ರದಿಂದ ಟಿವಿಕೆ ಅಭ್ಯರ್ಥಿಯಾಗಿ ವಿ.ಎಸ್.ಬಾಬು ಅವರನ್ನು ಕಣಕ್ಕಿಳಿಸಲಾಗಿದೆ. ಡಿಸಿಎಂ ಉದಯನಿಧಿ ಸ್ಟಾಲಿನ್ ಸ್ಪರ್ಧಿಸುತ್ತಿರುವ ಚೆಪಾಕ್-ಟ್ರಿಪ್ಲಿಕೇನ್ ಕ್ಷೇತ್ರದಿಂದ ಟಿವಿಕೆ ಅಭ್ಯರ್ಥಿಯಾಗಿ ಸೆಲ್ವಂ ಕಣಕ್ಕಿಳಿಯಲಿದ್ದಾರೆ. ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್.ಆನಂದ್ ಚೆನ್ನೈ ತ್ಯಾಗರಾಯ ನಗರ (ಟಿ.ನಗರ) ಕ್ಷೇತ್ರದಿಂದ, ಪಕ್ಷದ ಖಜಾಂಚಿ ಪಿ.ವೆಂಕಟರಮಣನ್ ಮೈಲಾಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಟಿವಿಕೆ ಮುಖಂಡ ಕೆ.ಎ.ಸೆಂಗೋಟ್ಟೈಯನ್ ಗೋಬಿಚೆಟ್ಟಿಪಾಳ್ಯಂನಿಂದ ಸ್ಪರ್ಧಿಸಲಿದ್ದಾರೆ. ಚುನಾವಣಾ ಪ್ರಚಾರ ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಆದವ್ ಅರ್ಜುನ ಚೆನ್ನೈ ವಿಲ್ಲಿವಕ್ಕಂ ಕ್ಷೇತ್ರದಿಂದ, ಅರುಣ್ರಾಜ್ ತಿರುಚೆಂಗೋಡ್ ಕ್ಷೇತ್ರದಿಂದ, ಪಕ್ಷದ ಪ್ರಮುಖ ಕಾರ್ಯಕರ್ತರಲ್ಲಿ ಒಬ್ಬರಾದ ರಾಜ್ಮೋಹನ್ ಚೆನ್ನೈನ ಎಗ್ಮೋರ್ (ಮೀಸಲು) ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ. ಪಕ್ಷದ ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಮಧುರೈನ ತಿರುಪರಾನಕುಂದ್ರಂ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ.
ಟಿವಿಕೆ ರ್ಯಾಲಿ ಕಾಲ್ತುಳಿತದಿಂದ ಹೆಸರುವಾಸಿಯಾಗಿರುವ ಕರೂರ್ ಕ್ಷೇತ್ರದಿಂದ ವಿ.ಪಿ.ಮಥಿಯಜಗನ್ ಸ್ಪರ್ಧಿಸುತ್ತಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ಟಿವಿಕೆ ಅಭ್ಯರ್ಥಿಗಳನ್ನು “ಜನರ ರಕ್ಷಕರು” ಎಂದು ಬಣ್ಣಿಸಿದರು. ಶಾಸಕರು ತಮ್ಮ ಅಧಿಕಾರವನ್ನು ಲೂಟಿ ಮಾಡಲು ಬಳಸಿಕೊಳ್ಳುವ ವ್ಯಕ್ತಿಗಳಾಗಿರಬಾರದು. ಬದಲಾಗಿ, ತಮ್ಮ ಕ್ಷೇತ್ರಗಳ ಹಿತಾಸಕ್ತಿ ಕಾಪಾಡುವ ರಕ್ಷಕರಾಗಿ ಸೇವೆ ಸಲ್ಲಿಸಬೇಕು ಎಂದರು.
ಡಿಎಂಕೆ-ಟಿವಿಕೆ ದ್ವಿಮುಖ ಹೋರಾಟ- ವಿಜಯ್: ಈ ಚುನಾವಣೆ ಡಿಎಂಕೆ ಮತ್ತು ಟಿವಿಕೆ ನಡುವಿನ ದ್ವಿಮುಖ ಹೋರಾಟ ಎಂದ ವಿಜಯ್, ತಮ್ಮದೇಆದ ಜನತಾ ಒಕ್ಕೂಟ ಮತ್ತು ಸ್ಟಾಲಿನ್ ನೇತೃತ್ವದ ಒಕ್ಕೂಟದ ನಡುವಿನ ಆರೋಗ್ಯಕರ ಸ್ಪರ್ಧೆ ಎಂದು ಬಣ್ಣಿಸಿದರು. ಈ ಚುನಾವಣೆಯನ್ನು ಬಡವರು ಮತ್ತು ವಂಚಕರ ನಡುವಿನ ಸ್ಪರ್ಧೆ, ಶ್ರಮಿಸುವವರು ಮತ್ತು ಆ ಶ್ರಮವನ್ನು ಬಳಸಿಕೊಳ್ಳುವವರ ನಡುವಿನ ಹೋರಾಟ ಎಂದರು.
ಟಿವಿಕೆಗೆ ಚುನಾವಣಾ ರಾಜಕೀಯದಲ್ಲಿ ಅನುಭವವಿಲ್ಲ ಎಂದು ರಾಜಕೀಯ ಕ್ಷೇತ್ರದಲ್ಲಿ ಕೇಳಿಬರುತ್ತಿರುವ ನಿರಂತರ ಟೀಕೆಗಳಿಗೆ ವಿಜಯ್ ಪ್ರತಿಕ್ರಿಯಿಸಿ, “ಕೆಲವು ವ್ಯಕ್ತಿಗಳು, ದುರುದ್ದೇಶದಿಂದ ಟಿವಿಕೆ ಅಭ್ಯರ್ಥಿಗಳಿಗೆ ಚುನಾವಣಾ ರಾಜಕೀಯದಲ್ಲಿ ಅನುಭವವಿಲ್ಲ, ವಿಜಯ್ಗಾಗಿ ಸೇರುವ ಜನಸಮೂಹವು ನಿಜವಾಗಿಯೂ ಮತಗಳಾಗಿ ಪರಿವರ್ತನೆಯಾಗುತ್ತದೆಯೇ? ಮತ್ತು ಆ ಮತಗಳು ಅಂತಿಮವಾಗಿ ಗೆಲುವಾಗಿ ಪರಿವರ್ತನೆಯಾಗುತ್ತವೆಯೇ?’ ಎಂದು ನಮ್ಮನ್ನು ಪ್ರಶ್ನಿಸುತ್ತಲೇ ಇದ್ದಾರೆ. ಅಂತಹ ಎಲ್ಲಾ ವಿಮರ್ಶಕರಿಗೆ, ನಾನು ಹೇಳುವುದೇನೆಂದರೆ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವವರಲ್ಲಿ ನಾವು ನಮ್ಮ ಟಿವಿಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ” ಎಂದು ತಿರುಗೇಟು ನೀಡಿದರು.
ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಸಾಮಾನ್ಯ ನಾಗರಿಕರನ್ನು ಕಣಕ್ಕಿಳಿಸುತ್ತಿದ್ದೇವೆ. ಟಿವಿಕೆ ಅಭ್ಯರ್ಥಿಗಳನ್ನು ತಮ್ಮ ಸ್ವಂತ ಮನೆ ಸದಸ್ಯರಂತೆ ತಮ್ಮ ಸ್ವಂತ ಸಹೋದರರು ಅಥವಾ ಸಹೋದರಿಯರಂತೆ ಪರಿಗಣಿಸುವಂತೆ ಮತ್ತು ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲು ಪಕ್ಷಕ್ಕೆ ಮತ ಹಾಕುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸುವಂತೆ ಮನವಿ ಮಾಡಿದರು.
