ಉದಯವಾಹಿನಿ, 2026ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ. ಆರ್ಸಿಬಿಯ ಮುಂದಿನ ಸಿಎಸ್ಕೆ ವಿರುದ್ಧ ಏಪ್ರಿಲ್ 5 ರ ಭಾನುವಾರದಂದು ನಡೆಯಲಿದೆ. ಅಂದರೆ ಈ ಪಂದ್ಯಕ್ಕೆ ಇನ್ನು ಸಾಕಷ್ಟು ಸಮಯ ಉಳಿದಿದೆ. ಆದಾಗ್ಯೂ ಆರ್ಸಿಬಿ ತಂಡವನ್ನು ಸೇರಲು ಪಣತೊಟ್ಟಿರುವ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ, ಲಂಕಾ ಕ್ರಿಕೆಟ್ ಮಂಡಳಿಯ ಕೇಂದ್ರ ಒಪ್ಪಂದದಿಂದ ಹೊರಬರಲು ನಿರ್ಧರಿಸಿದ್ದಾರೆ. ಹೀಗಾಗಿ ಅವರು ನನ್ನನ್ನು ಕೇಂದ್ರ ಒಪ್ಪಂದದಲ್ಲಿ ಸೇರಿಸದಂತೆ ಲಂಕಾ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ವಾಸ್ತವವಾಗಿ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾದ ಕಾರಣದಿಂದಾಗಿ ನುವಾನ್ ತುಷಾರ ಐಪಿಎಲ್ನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಯಾವುದೇ ಆಟಗಾರ ವಿದೇಶಿ ಲೀಗ್ಗಳಲ್ಲಿ ಆಡಲು ಸಾಧ್ಯವಿಲ್ಲ ಎಂಬುದು ಶ್ರೀಲಂಕಾ ಕ್ರಿಕೆಟ್ನ ನೀತಿಯಾಗಿದೆ. ಹೀಗಾಗಿ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿರುವ ತುಷಾರ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಇದುವರೆಗೂ ಸೇರಲಾಗಿಲ್ಲ. ನುವಾನ್ ತುಷಾರ ಅವರನ್ನು ಆರ್ಸಿಬಿ 1.6 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಆದಾಗ್ಯೂ, ಶ್ರೀಲಂಕಾ ಕ್ರಿಕೆಟ್ ಅವರಿಗೆ ಎನ್ಒಸಿ ನೀಡಿಲ್ಲ. ಹೀಗಾಗಿ ಅವರು ಇದುವರೆಗೆ ತಂಡವನ್ನು ಸೇರಲಾಗಿಲ್ಲ. ಇದುವರೆಗೆ ಐಪಿಎಲ್ನಲ್ಲಿ 8 ಪಂದ್ಯಗಳನ್ನಾಡಿರುವ ನುವಾನ್ ತುಷಾರ 9 ವಿಕೆಟ್ಗಳನ್ನು ಕಬಳಿಸಿದ್ದಾರೆ. 2024 ರ ಐಪಿಎಲ್ನಲ್ಲಿ ಮುಂಬೈ ಪರ ಆಡಿದ್ದ ತುಷಾರ, ಕಳೆದ ವರ್ಷ ಆರ್ಸಿಬಿ ಪರ ಕೇವಲ ಒಂದು ಪಂದ್ಯವನ್ನು ಆಡಿದ್ದರು. ಇದೀಗ ಫಿಟ್ನೆಸ್ ಪರೀಕ್ಷೆಯಲ್ಲಿ ಅನುತೀರ್ಣರಾಗಿರುವ ತುಷಾರ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
