ಉದಯವಾಹಿನಿ, ಬಾಲಿವುಡ್ ಅಂಗಳದಲ್ಲಿ ಕಳೆದ ಕೆಲವು ದಿನಗಳಿಂದ ಒಂದು ಸುದ್ದಿ ಸಖತ್ ಸೌಂಡ್ ಮಾಡುತ್ತಿತ್ತು. ಅದುವೇ ‘ತಾನಾಜಿ: ದಿ ಅನ್ಸಂಗ್ ವಾರಿಯರ್’ ಅಂತಹ ಬ್ಲಾಕ್ಬಸ್ಟರ್ ಸಿನಿಮಾ ನೀಡಿದ್ದ ನಟ ಅಜಯ್ ದೇವಗನ್ ಮತ್ತು ನಿರ್ದೇಶಕ ಓಂ ರಾವುತ್ ಮತ್ತೆ ಒಂದಾಗುತ್ತಿದ್ದಾರೆ ಎಂಬ ವಿಷಯ. ಈ ಜೋಡಿ ಮತ್ತೊಂದು ಐತಿಹಾಸಿಕ ಸಾಹಸಕ್ಕೆ ಕೈ ಹಾಕಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈಗ ಈ ಎಲ್ಲಾ ಸುದ್ದಿಗಳಿಗೂ ಅಜಯ್ ದೇವಗನ್ ಅವರ ತಂಡ ಅಧಿಕೃತವಾಗಿ ತೆರೆ ಎಳೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವದಂತಿಗಳ ಬಗ್ಗೆ ಅಜಯ್ ದೇವಗನ್ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. “ಅಜಯ್ ಮತ್ತು ಓಂ ರಾವುತ್ ಮತ್ತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದೆಲ್ಲಾ ಸುಳ್ಳು ಸದ್ಯಕ್ಕೆ ಅಂತಹ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಇಬ್ಬರೂ ತಮ್ಮ ತಮ್ಮ ಮುಂದಿನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ,” ಎಂದು ತಿಳಿಸುವ ಮೂಲಕ ಫ್ಯಾನ್ಸ್ ತಲೆಯಲ್ಲಿ ಮನೆ ಮಾಡಿದ್ದಗೊಂದಲವನ್ನು ಪರಿಹರಿಸಿದ್ದಾರೆ.
ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿರುವ ಅಜಯ್ ದೇವಗನ್, ಸದ್ಯ ತಮ್ಮ ಮೋಸ್ಟ್ ಎಕ್ಸ್ಪೆಕ್ಟಡ್ ಸಿನಿಮಾವಾದ ‘ದೃಶ್ಯಂ 3’ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ‘ವಿಜಯ್ ಸಾಳಗಾಂವೃರ್’ ಪಾತ್ರವನ್ನು ಮತ್ತೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾದಿದ್ದಾರೆ. ಈ ಸಿನಿಮಾ ಅಕ್ಟೋಬರ್ 2ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ.
