ಉದಯವಾಹಿನಿ, ಪುರಿ (ಒಡಿಶಾ): ಯಾತ್ರಾ ಸ್ಥಳವಾಗಿ ಗುರುತಿಸಿಕೊಂಡಿರುವ ಪುರಿಯಲ್ಲಿ ಶತಮಾನಗಳಷ್ಟು ಹಳೆಯದಾದ ಕುಸ್ತಿಯು ಅಳಿವಿನಂಚಿನಲ್ಲಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಸ್ತಿ ಬೆಳವಣಿಗೆಯಲ್ಲಿ ಸರ್ಕಾರದ ಬೆಂಬಲ ಮತ್ತು ಆಧುನಿಕ ಮೂಲಸೌಕರ್ಯಗಳ ಕೊರತೆಯನ್ನು ಬಿಂಬಿಸಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಜಗ ಅಖಾಡಗಳಲ್ಲಿ (ಪುರಿಯಲ್ಲಿ ಕುಸ್ತಿ ಅಖಾಡಗಳು) ಮೀಸಲಾಗಿ ಕುಸ್ತಿ ಅಕಾಡೆಮಿಯನ್ನು ಸ್ಥಾಪಿಸುವ ಬೇಡಿಕೆ ಹೆಚ್ಚಿದೆ. ಪುರಿಯಿಂದ ಕುಸ್ತಿ ಕಲೆ ಕ್ರಮೇಣ ಕಣ್ಮರೆಯಾಗುತ್ತಿರುವ ಬಗ್ಗೆ ಅನೇಕ ಕ್ರೀಡಾ ಉತ್ಸಾಹಿಗಳು ಕಳವಳ ವ್ಯಕ್ತಪಡಿಸುತ್ತಿದ್ದರೂ, ಹಳೆಯ ಸಂಪ್ರದಾಯವನ್ನು ಜೀವಂತವಾಗಿಡಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ.
ಪುರಿಯಾದ್ಯಂತ ಸಂಭ್ರಮದಿಂದ ಆಚರಿಸಲಾದ ಮಹಾ ಬಿಷುಬ ಸಂಕ್ರಾಂತಿ ಅಥವಾ ಪಣ ಸಂಕ್ರಾಂತಿಯ ಆಚರಣೆಯ ಸಂದರ್ಭದಲ್ಲಿ ಈ ವಿಷಯವು ಗಮನ ಸೆಳೆಯಿತು. ಈ ದಿನವನ್ನು ಹನುಮಾನ್ ಜಯಂತಿ ಎಂದೂ ಆಚರಿಸಲಾಗುವುದರಿಂದ, ಹಲವಾರು ಜಗ ಅಖಾಡಗಳು ಭಗವಾನ್ ಹನುಮಾನ್ ಪೂಜೆಯೊಂದಿಗೆ ಪ್ರಾರಂಭವಾಗುತ್ತವೆ. ಬಳಿಕ ಸಾಂಪ್ರದಾಯಿಕ ಆಯುಧ ಪೂಜೆ ಮತ್ತು ಕುಸ್ತಿ ಪಂದ್ಯಗಳು ಜರುಗುತ್ತವೆ. ವಿಶೇಷವಾಗಿ ಜಗನ್ನಾಥ ದೇವಾಲಯದ ಸೇವಕ ಕುಟುಂಬಗಳ ಯುವಕರು, ಅಖಾಡಕ್ಕೆ ಪ್ರವೇಶಿಸುವ ಮೊದಲು ದೇವರಿಗೆ ಕುಸ್ತಿಪಟುಗಳು ಧರಿಸುವ ಉಡುಪನ್ನು ಅರ್ಪಿಸುವ ಮೂಲಕ ವಿಧಿವಿಧಾನಗಳ ಪ್ರಕಾರ ಔಪಚಾರಿಕವಾಗಿ ಕುಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ.
ಈ ಕುಸ್ತಿಯಲ್ಲಿ ಮಕ್ಕಳು ಮತ್ತು ಸ್ಥಳೀಯ ಯುವಕರು ಪಂದ್ಯಗಳಲ್ಲಿ ಭಾಗವಹಿಸಿದರು. ಇವರೆಲ್ಲರೂ ನುರಿತವರಿಂದ ತರಬೇತಿ ಪಡೆದವರು. ಈ ಸಂಪ್ರದಾಯವನ್ನು ನೂರಾರು ವರ್ಷಗಳಿಂದ ಮುಂದುವರೆಸಿದ್ದಾರೆ. ಇದೆ ವೇಳೇ ಭಕ್ತರು ಸಾಂಪ್ರದಾಯಿಕ ಹಬ್ಬದ ಪಾನೀಯವಾದ ಪನದಲ್ಲಿಯೂ ಭಾಗವಹಿಸಿದರು. ಜಗನ್ನಾಥ ಸಂಸ್ಕೃತಿ ಸಂಶೋಧಕ ಡಾ. ನರೇಶ್ ಚಂದ್ರ ದಾಸ್ ವಿವರಿಸುವಂತೆ, ಜಗನ್ನಾಥ ದೇವಾಲಯ ನಿರ್ಮಾಣದ ನಂತರ ಜಗ ಅಖಾಡಗಳ ಸಂಪ್ರದಾಯ ಹುಟ್ಟಿಕೊಂಡಿತು. ಶತಮಾನಗಳಷ್ಟು ಹಳೆಯದಾದ ಜಗನ್ನಾಥ ದೇವಾಲಯವನ್ನು ಬಾಹ್ಯ ದಾಳಿಯಿಂದ ರಕ್ಷಿಸಲು ಯುವಕರಿಗೆ ಕುಸ್ತಿ ಮತ್ತು ಯುದ್ಧ ತಂತ್ರಗಳಲ್ಲಿ ತರಬೇತಿ ನೀಡಲು ಅಂದಿನ ಆಡಳಿತಗಾರರು ದೇವಾಲಯದ ಸುತ್ತಮುತ್ತಲಿನ ವಿವಿಧ ಪ್ರದೇಶಗಳಲ್ಲಿ ಅಖಾಡಗಳನ್ನು ಸ್ಥಾಪಿಸಿದ್ದರು. ಈ ಸಮರ ಸಂಪ್ರದಾಯವು ಸುಮಾರು 800 ವರ್ಷಗಳಿಂದ ಮುಂದುವರೆದಿದೆ.
