ಉದಯವಾಹಿನಿ, ಸಾಗರ್(ಮಧ್ಯಪ್ರದೇಶ): ಬುಂದೇಲ್‌ಖಂಡದ ಪ್ರಾಚೀನ ಸಮರ ಕಲೆಯಾದ ‘ಅಖಾಡ'(ಬೆತ್ತದಿಂದ ಹೋರಾಡುವುದು)ಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭಗವಾನ್‌ದಾಸ್ ರಾಯ್​​ಕ್ವಾರ್​ ದೌ ಅವರು ಶನಿವಾರ ನಿಧನರಾದರು.
82ರ ಪ್ರಾಯದ ಭಗವಾನ್​ ದಾಸ್​ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭೋಪಾಲ್‌ನ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದರು ಎಂದು ಪುತ್ರ ರಾಜ್‌ಕುಮಾರ್ ರಾಯ್​​ಕ್ವಾರ್​ ಅವರು ದೃಢಪಡಿಸಿದ್ದಾರೆ.

2026ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ‘ಅನ್‌ಸಂಗ್ ಹೀರೋಸ್’ ವಿಭಾಗದ ಅಡಿಯಲ್ಲಿ ‘ಬುಂದೇಲಿ ಮಾರ್ಷಲ್ ಆರ್ಟ್ಸ್’ ವಿಭಾಗದಲ್ಲಿ ಭಗವಾನ್‌ದಾಸ್ ರಾಯ್​ ಕ್ವಾರ್​ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು.
ಬುಂದೇಲಿ ಸಮರ ಕಲೆಗಳ ಮುಕುಟ: ರಾಯ್​ಕ್ವಾರ್​ ಅವರು ಬುಂದೇಲಿ ಸಮರ ಕಲೆಗಳ ರಕ್ಷಣೆಗೆ ತಮ್ಮ ಇಡೀ ಜೀವನವನ್ನೇ ಸವೆಸಿದ್ದಾರೆ. ಬುಂದೇಲ್‌ಖಂಡದ ಪ್ರಸಿದ್ಧ ಛತ್ರಸಾಲ್ ವ್ಯಾಯಾಮ ಶಾಲೆಯ ‘ಉಸ್ತಾದ್’ (ಮಾಸ್ಟರ್) ಆಗಿಯೂ ಸೇವೆ ಸಲ್ಲಿಸಿದ್ದಾರೆ.

‘ಲಾಠಿ’ (ಜನರು), ‘ಭಾಲಾ’ (ಈಟಿ), ‘ಧಲ್’ (ಗುರಾಣಿ), ‘ತಲ್ವಾರ್’ (ಕತ್ತಿ) ಮತ್ತು ‘ತ್ರಿಶೂಲ’ (ತ್ರಿಶೂಲ) ಒಳಗೊಂಡ ಯುದ್ಧ ತಂತ್ರಗಳನ್ನು ಮೈಗೂಡಿಸಿಕೊಂಡಿದ್ದ ಇವರು, ವಿವಿಧೆಡೆ ಹಲವು ಪ್ರದರ್ಶನಗಳನ್ನು ನೀಡಿದ್ದರು. ದೇಶ ಮತ್ತು ವಿದೇಶಗಳಲ್ಲಿ ಬುಂದೇಲಿ ಸಮರ ಕಲೆಗಳ ಪರಾಕ್ರಮವನ್ನು ಪಸರಿಸಿದ್ದರು. ಬೆತ್ತದ ಹೋರಾಟಕ್ಕೆ ಮರುಜೀವ: ಬಿದಿರಿನ ಬೆತ್ತಗಳನ್ನು ಬಳಸಿಕೊಂಡು ಹೋರಾಡುವ ಸಮರ ಕಲೆಯಾದ ‘ಅಖಾಡ’ವು ಅಳಿವಿನ ಅಂಚಿನಲ್ಲಿತ್ತು. ಕೇವಲ ವೇದಿಕೆ ಪ್ರದರ್ಶನಗಳಲ್ಲಿ ಮಾತ್ರ ಬಳಸಲಾಗುತ್ತಿದ್ದ ಈ ಕಲೆಯತ್ತ ಯುವಕರನ್ನು ಆಕರ್ಷಿಸಿ, ಅದಕ್ಕೆ ಮರುಜೀವ ನೀಡಿದ ಕೀರ್ತಿ ರಾಯ್‌ಕ್ವಾರ್​ ಅವರಿಗೆ ಸಲ್ಲುತ್ತದೆ.

ಜನವರಿಯಲ್ಲಿ ನಡೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೊಡಮಾಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಬುಂದೇಲ್‌ಖಂಡ್ ಪ್ರದೇಶ ಮತ್ತು ಅಲ್ಲಿನ ಸ್ಥಳೀಯ ಸಮರ ಕಲಾ ಪ್ರಕಾರಗಳಿಗೆ ಅರ್ಪಿಸಿದ್ದರು.

ಪ್ರಶಸ್ತಿ ಘೋಷಣೆಯ ನಂತರ ಈಟಿವಿ ಭಾರತ್‌ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ರಾಯ್​ಕ್ವಾರ್, ತಮ್ಮ ಜೀವನದ ತಪಸ್ಸು ಮತ್ತು ಕಠಿಣ ಪರಿಶ್ರಮಕ್ಕೆ ಅಂತಿಮವಾಗಿ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಗೌರವ ಮರೆಯಾಗುತ್ತಿರುವ ಕಲಾ ಪ್ರಕಾರಗಳಿಗೆ ನೀಡುವ ಪ್ರೋತ್ಸಾಹ ಎಂದು ಬಣ್ಣಿಸಿದ್ದರು.

ತಮಗೆ ಸಿಕ್ಕ ಪ್ರಶಸ್ತಿ, ಬುಂದೇಲ್‌ಖಂಡ್‌ ಪ್ರದೇಶದ ಸ್ಮರಣೀಯ ಸಾಧನೆಯಾಗಿದೆ. ಅಳಿವಿನಂಚಿನಲ್ಲಿರುವ ಕಲಾ ಪ್ರಕಾರಗಳನ್ನು ಉತ್ತೇಜಿಸುವ ಭಾರತ ಸರ್ಕಾರದ ದೃಷ್ಟಿಕೋನವನ್ನು ಇದು ಪ್ರತಿಬಿಂಬಿಸುತ್ತದೆ. ನಿಜಕ್ಕೂ ಇದು ಬುಂದೇಲ್‌ಖಂಡ ಕಲೆಗಳು ಮತ್ತು ಅವುಗಳನ್ನು ಅಭ್ಯಾಸ ಮಾಡುವ ಸಮರವೀರರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಅಂದು ಹೇಳಿದ್ದರು.

 

Leave a Reply

Your email address will not be published. Required fields are marked *

error: Content is protected !!