ಉದಯವಾಹಿನಿ,ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳಷ್ಟೇ ಬಾಕಿ ಇರುವಾಗ ಚುನಾವಣಾ ಆಯೋಗವು ಸುಮಾರು ಏಳು ಲಕ್ಷ ಹೊಸ ಮತದಾರರನ್ನು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗೆ ಸೇರಿಸಿದೆ. ಆದ್ರೆ ಈ ಹೆಚ್ಚುವರಿ ಮತದಾರರ ವಯಸ್ಸು ಅಥವಾ ಲಿಂಗ ವಿಂಗಡಣೆಯ ಮಾಹಿತಿಯನ್ನು ಆಯೋಗ ಇನ್ನೂ ಬಹಿರಂಗಪಡಿಸಿಲ್ಲ.
ಈ ಹೊಸ ಮತದಾರರಲ್ಲಿ ಸುಮಾರು 3.22 ಲಕ್ಷ ಜನರು ಮೊದಲ ಹಂತದಲ್ಲಿ ಮತ ಚಲಾಯಿಸಲಿದ್ದಾರೆ. ಉಳಿದ ಸುಮಾರು 3.88 ಲಕ್ಷ ಮತದಾರರು ಎರಡನೇ ಹಂತದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಶನಿವಾರ ಪಿಟಿಐಗೆ ತಿಳಿಸಿದರು.

ಈ ಹೊಸ ಮತದಾರರಲ್ಲಿ ಎಷ್ಟು ಮಂದಿ 18 ವರ್ಷ ತುಂಬಿದ ಮೊದಲ ಬಾರಿಯ ಮತದಾರರಾಗಿದ್ದಾರೆ ಅಥವಾ ಈ ಮತದಾರರ ವಿವರವಾದ ಲಿಂಗ ವಿಂಗಡಣೆಯನ್ನು ಆಯೋಗವು ನಿರ್ದಿಷ್ಟಪಡಿಸಿಲ್ಲ.

ಪಟ್ಟಿಯಲ್ಲಿ ಸೇರ್ಪಡೆಗಾಗಿ ಸ್ವೀಕರಿಸಿದ ಫಾರ್ಮ್ -6 ಅರ್ಜಿಗಳ ಸಂಖ್ಯೆ ಅಥವಾ ಅವುಗಳಲ್ಲಿ ಎಷ್ಟು ತಿರಸ್ಕರಿಸಲ್ಪಟ್ಟಿವೆ ಎಂಬುದನ್ನು ಸಹ ಆಯೋಗವು ಬಹಿರಂಗಪಡಿಸಿಲ್ಲ. “ಒಟ್ಟು ಅಂಕಿಅಂಶಗಳನ್ನು ಮಾನದಂಡಗಳಿಗೆ ಅನುಗುಣವಾಗಿ ಬಿಡುಗಡೆ ಮಾಡಲಾಗಿದೆ. ವಿವರವಾದ ಅಂಕಿ-ಅಂಶವನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತದೆ ಮತ್ತು ಅಗತ್ಯವಿದ್ದರೆ ನಂತರ ಹಂಚಿಕೊಳ್ಳಬಹುದು” ಎಂದು ಹಿರಿಯ ಚುನಾವಣಾ ಅಧಿಕಾರಿ ಹೇಳಿದರು.

ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ ಈಗ ಆರು ಕೋಟಿ, 82 ಲಕ್ಷ, ಐವತ್ತೊಂದು ಸಾವಿರದ ಎಂಟು (6,82,51,008) ಆಗಿದ್ದು, ನ್ಯಾಯಮಂಡಳಿಯ ಆದೇಶಗಳನ್ನು ಅನುಸರಿಸಿ ಹೆಸರುಗಳನ್ನು ಸೇರಿಸಿದರೆ ಇದು ಹೆಚ್ಚಾಗಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ನಡುವೆ, ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ವರ್ಚುವಲ್ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಮತದಾನದ ದಿನದಂದು ಯಾವುದೇ ಅಡಚಣೆಯನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.

ಎಪ್ರಿಲ್ 23 ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಮುಂಚಿತವಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರನ್ನು ಉದ್ದೇಶಿಸಿ ಮಾತನಾಡಿದ ಅಗರ್ವಾಲ್, ಚುನಾವಣಾ ದಿನದಂದು ಯಾವುದೇ ಅಹಿತಕರ ಘಟನೆ ನಡೆದರೆ ತ್ವರಿತ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

“ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಯಾವುದೇ ಲೋಪವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಉಸ್ತುವಾರಿ ಅಧಿಕಾರಿಗಳನ್ನು ಅಮಾನತುಗೊಳಿಸಬಹುದು” ಎಂದು ಸಿಇಒ ಎಚ್ಚರಿಸಿದ್ದಾರೆ ಎಂದು ಸಭೆಯಲ್ಲಿದ್ದ ಮೂಲಗಳು ತಿಳಿಸಿವೆ.

ಮತದಾನದ ಸಮಯದಲ್ಲಿ ಯಾವುದೇ ಪ್ರದೇಶದಿಂದ ಯಾವುದೇ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಅಥವಾ ಸ್ಫೋಟಕಗಳು ಪತ್ತೆಯಾದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಿಇಒ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. “ಅಂತಹ ಸಂದರ್ಭಗಳಲ್ಲಿ, ಜವಾಬ್ದಾರಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಮೇಲಿರುತ್ತದೆ. ತಕ್ಷಣ ಕ್ರಮ ಕೈಗೊಳ್ಳಲು ವಿಫಲವಾದರೆ ಚುನಾವಣಾ ಆಯೋಗದಿಂದ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಅವರು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!