ಉದಯವಾಹಿನಿ,ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿರುವಾಗ ಝಾರ್ಗ್ರಾಮ್ ಜಿಲ್ಲೆಯ ಮತಗಟ್ಟೆಯೊಂದಕ್ಕೆ ಕಾಡಾನೆಯೊಂದು ಆಗಮಿಸಿತ್ತು. ಝಾರ್ಗ್ರಾಮ್ ಜಿಲ್ಲೆಯ ಜಿತುಸೋಲ್ನ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯ ಬಳಿ ಆನೆ ಕಾಣಿಸಿಕೊಂಡಿತ್ತು. ಮತದಾನ ಪ್ರಾರಂಭವಾಗುವ ಮೊದಲು ‘ರಾಮಲಾಲ್’ ಎಂದು ಹೆಸರಿನ ಕಾಡಾನೆ ಮತಗಟ್ಟೆಯ ಬಳಿ ಸುಳಿದಾಡಿತ್ತು.ಮತದಾನ ಆರಂಭವಾಗುವ ಸ್ವಲ್ಪ ಸಮಯದ ಮೊದಲು ಆನೆಯು ಮತಗಟ್ಟೆಯ ಸಾಲಿನ ಬಳಿ ಬಂದು ನಿಂತಿದ್ದರಿಂದ ಮತದಾರರಲ್ಲಿ ಮತ್ತು ಅಧಿಕಾರಿಗಳಲ್ಲಿ ಸ್ವಲ್ಪ ಆತಂಕ ಉಂಟಾಗಿತ್ತು. ಆನೆಯು ಅಲ್ಲಿ ನಿಲ್ಲಿಸಿದ್ದ ಸರಕು ಸಾಗಣೆ ವಾಹನವೊಂದನ್ನು ಕುತೂಹಲದಿಂದ ಗಮನಿಸಿ ನಂತರ ಯಾರಿಗೂ ಹಾನಿ ಮಾಡದೇ ಅಲ್ಲಿಂದ ತೆರಳಿತ್ತು. ಲೋಧಾಶುಲಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಆನೆಯನ್ನು ಸುರಕ್ಷಿತವಾಗಿ ಅರಣ್ಯದ ಕಡೆಗೆ ಕಳುಹಿಸಿದರು. ನಂತರ ಮತದಾನವು ಸುಗಮವಾಗಿ ಮುಂದುವರಿಯಿತು ಎಂದು ವರದಿಗಳು ತಿಳಿಸಿವೆ.
