ಉದಯವಾಹಿನಿ, ‘ಧುರಂಧರ್‌’ ಮತ್ತು ಅದರ ಮುಂದುವರಿದ ಭಾಗ ‘ಧುರಂಧರ್: ದಿ ರಿವೆಂಜ್’ ಚಿತ್ರಗಳ ಭರ್ಜರಿ ಯಶಸ್ಸಿನ ಬಳಿಕ ನಟ ರಾಕೇಶ್ ಬೇಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾದಲ್ಲಿ ಅವರು ಅಭಿನಯಿಸಿದ ಜಮೀಲ್ ಜಮಾಲಿ ಪಾತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.
ಚಿತ್ರದ ಯಶಸ್ಸಿನ ಹಿನ್ನೆಲೆ ನಿರ್ಮಾಪಕರು ಹಾಗೂ ನಿರ್ದೇಶಕ ಆದಿತ್ಯಧರ್, ರಾಕೇಶ್ ಬೇಡಿಗೆ ವಿಶೇಷವಾಗಿ 1 ಕೋಟಿ ರೂಪಾಯಿ ಬೋನಸ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಕೇಶ್ ಬೇಡಿ, ಆ ವರದಿಯನ್ನು ಹಾಸ್ಯಮಯವಾಗಿ ತಳ್ಳಿಹಾಕಿದ್ದಾರೆ. “ನನ್ನ ಖಾತೆಗೆ ಅಷ್ಟು ಹಣ ಬಂದಿಲ್ಲ. ಎಲ್ಲಿ ಬಂದಿದೆ ಹೇಳಿದರೆ ಹೋಗಿ ತೆಗೆದುಕೊಂಡು ಬರುತ್ತೇನೆ” ಎಂದು ಚುಟುಕಾಗಿ ಉತ್ತರಿಸಿದ್ದಾರೆ. ಚಿತ್ರದಲ್ಲಿನ ಅವರ ‘ಬಚ್ಚಾ ಹೈತು ಮೇರಾ’ ಸಂಭಾಷಣೆ ಸಖತ್ ವೈರಲ್ ಆಗಿದ್ದು, ಹಲವು ಮೀಮ್ಸ್ಗಳಿಗೂ ಕಾರಣವಾಗಿದೆ. ‘ಧುರಂಧರ್: ದಿ ರಿವೆಂಜ್’ನಲ್ಲಿ ಅವರ ಪಾತ್ರಕ್ಕೆ ಮಹತ್ವದ ತಿರುವು ನೀಡಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಾಕೇಶ್ ಬೇಡಿ, ಸಿನಿಮಾಗಳು, ಧಾರಾವಾಹಿಗಳು ಹಾಗೂ ರಂಗಭೂಮಿಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!