ಉದಯವಾಹಿನಿ, ತೆಲಂಗಾಣ: ಬಿಸಿಲಿನ ತಾಪಕ್ಕೆ ಆದಿಲಾಬಾದ್ ಜಿಲ್ಲೆ ಬೆಂಕಿಯ ಕುಲುಮೆಯಂತೆ ಉರಿಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಪ್ರಾರಂಭವಾಗುವ ತೀವ್ರ ಶಾಖವು ಸಂಜೆ 7 ಗಂಟೆಯಾದರೂ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಹಗಲಿನಲ್ಲಿ ರಸ್ತೆಗಳು ನಿರ್ಜನವಾಗುತ್ತಿವೆ.ಕಳೆದ ಕೆಲವು ದಿನಗಳಿಂದ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದ್ದು, ಭಾನುವಾರ 45.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ 3.5 ಡಿಗ್ರಿ ಸೆಲ್ಸಿಯಸ್​ ಹೆಚ್ಚಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಆರು ಜನರು ಬಿಸಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ. ಹವಾಮಾನ ಇಲಾಖೆ (ಐಎಂಡಿ) ಹಲವೆಡೆ ಹೀಟ್​ ವೇವ್​ ದಾಖಲಾಗಿದೆ ಎಂದು ತಿಳಿಸಿದೆ.ಸೋಮವಾರ ಮತ್ತು ಮಂಗಳವಾರ ತಾಪಮಾನ ಒಂದರಿಂದ ಎರಡು ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಉತ್ತರ ತೆಲಂಗಾಣ ಜಿಲ್ಲೆಗಳಲ್ಲಿ ಮತ್ತು ಮಂಗಳವಾರ ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. 29 ರಂದು ಇಡೀ ರಾಜ್ಯದಲ್ಲಿ, 30 ರಂದು ಮಧ್ಯ ಮತ್ತು ದಕ್ಷಿಣ ತೆಲಂಗಾಣ ಜಿಲ್ಲೆಗಳಲ್ಲಿ ಮತ್ತು ಮುಂದಿನ ತಿಂಗಳ 1 ಮತ್ತು 2 ರಂದು ರಾಜ್ಯದಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಮಳೆಯಾಗುವ ಸೂಚನೆಗಳಿವೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಮುನ್ನೆಚ್ಚರಿಕೆ: ಮಧ್ಯಾಹ್ನದ ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಕೆಲಸಗಳನ್ನು ಬೆಳಗ್ಗೆ ಅಥವಾ ಸಂಜೆ ಪೂರ್ಣಗೊಳಿಸಬೇಕು. ಬಿಸಿ ಗಾಳಿಯಿಂದ ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹೊರಗೆ ಹೋಗುವ ಅಗತ್ಯವಿದ್ದರೆ ಛತ್ರಿ, ಟೋಪಿ ಅಥವಾ ತಲೆಯನ್ನು ಮುಚ್ಚಿಕೊಳ್ಳಲು ಕರವಸ್ತ್ರವನ್ನು ಬಳಸಬೇಕು. ಸಾಕಷ್ಟು ನೀರು ಮತ್ತು ಮಜ್ಜಿಗೆ ಕುಡಿಯುವುದು ಅತ್ಯಗತ್ಯ.

ಹೀಟ್ ವೇವ್​ ಇನ್ನೊಂದು ವಾರ ಮುಂದುವರಿಯಲಿದೆ: ಪ್ರತಿ ವರ್ಷ ಮೇ ತಿಂಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುವುದು ಸಹಜವಾದರೂ, ಈ ವರ್ಷ ಎಪ್ರಿಲ್‌ನಲ್ಲಿಯೇ ತಾಪಮಾನವು 40 ಡಿಗ್ರಿ ಗಡಿಯನ್ನು ದಾಟಿದೆ. ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಮೋಹನ್ ದಾಸ್, ಉತ್ತರ ಮತ್ತು ವಾಯುವ್ಯ ದಿಕ್ಕುಗಳಿಂದ ಬೀಸುತ್ತಿರುವ ಬಿಸಿ ಗಾಳಿಯಿಂದಾಗಿ ಶಾಖದ ತೀವ್ರತೆ ಹೆಚ್ಚುತ್ತಿದೆ. ಇದು ಹೀಟ್​ ವೇವ್​​ ಆಗಲಿದೆ ಎಂದು ಹೇಳಿದ್ದಾರೆ. ಇದರಿಂದ ಕಟ್ಟಡದ ಗೋಡೆಗಳು ಬಿಸಿಯಾಗುತ್ತಿವೆ ಮತ್ತು ಓವರ್‌ಹೆಡ್ ಟ್ಯಾಂಕ್‌ಗಳಲ್ಲಿನ ನೀರು ತಡರಾತ್ರಿಯವರೆಗೂ ಬಿಸಿಯಾಗಿರುತ್ತದೆ. ಫ್ಯಾನ್‌ಗಳು ಓಡುತ್ತಿದ್ದರೂ ಸಹ, ಗಾಳಿಯು ಬಿಸಿಯಾಗಿರುತ್ತದೆ.

ಆದಿಲಾಬಾದ್ ಜಂಟಿ ಜಿಲ್ಲೆಗೆ ರೆಡ್ ಅಲರ್ಟ್: ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಎಪ್ರಿಲ್ ತಿಂಗಳ ಸರಾಸರಿ ತಾಪಮಾನ 40 ಡಿಗ್ರಿ ಇದ್ದರೂ, ಭಾನುವಾರ 44 ಡಿಗ್ರಿಗಿಂತ ಹೆಚ್ಚಾಗಿದೆ. ನರಸಾಪುರ, ಜನ್ಕಾಪುರ, ದಸ್ತೂರಾಬಾದ್, ಬೇಲಾ, ಕುಂದರಂ, ಜೈನಾಥ್, ಭೈನ್ಸಾ, ಮಂಚೇರಿಯಲ್, ಕೆರಮೇರಿ, ಪೆಂಬಿ ಮತ್ತು ತನೂರ್ ಪ್ರದೇಶಗಳಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್​ ಮೀರಿದೆ. ತಾಪಮಾನ 45 ಡಿಗ್ರಿ ತಲುಪಿದರೆ ರೆಡ್ ಅಲರ್ಟ್ ಘೋಷಿಸಲಾಗುವುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!