ಉದಯವಾಹಿನಿ, ದಾವಣಗೆರೆ: ಸೋಮವಾರ ದಾವಣಗೆರೆ ದಕ್ಷಿಣ ಮತಕ್ಷೇತ್ರದ ಬೈ ಎಲೆಕ್ಷನ್ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ. ಮತ ಎಣಿಕೆ ಮಾಡಲು ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ದಾವಣಗೆರೆ ನಗರದ ಡಿಆರ್ಆರ್ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಬಿಗಿ ಭದ್ರತೆಗಾಗಿ ಪೊಲೀಸ್ ಹಾಗೂ ಸಿಆರ್ಪಿಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ ಮತ ಎಣಿಕೆ ಕೇಂದ್ರದಿಂದ ಗೇಟ್ ತನಕ ಮೂರು ರೀತಿಯ ಭದ್ರತೆಗಳನ್ನು ಮಾಡಲಾಗಿದೆ. ಜೊತೆಗೆ ಅಭ್ಯರ್ಥಿಗಳಿಗೆ, ಏಜೆಂಟ್ಗಳಿಗೆ ಕ್ಯೂಆರ್ ಕೋಡ್ ರೀತಿಯ ಗುರುತಿನ ಚೀಟಿಗಳನ್ನು ಕೊಡಲಾಗಿದೆ. ಯಾರ ಬಳಿ ಗುರುತಿನ ಚೀಟಿ ಇರುತ್ತೊ ಅವರನ್ನು ಮಾತ್ರ ಮತ ಎಣಿಕೆಯ ಕೇಂದ್ರಕ್ಕೆ ಬಿಡಲಾಗುತ್ತದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾಧಿಕಾರಿ ಸಂತೋಷ್ ಕುಮಾರ್ ಮಾಹಿತಿ ನೀಡಿದ್ದಾರೆ.ದಾವಣಗೆರೆ ದಕ್ಷಿಣ ಕ್ಷೇತ್ರದ ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಕ್ಕೆ ಚುನಾವಣಾ ಅಧಿಕಾರಿ ಸಂತೋಷ್ ಕುಮಾರ್ ಅವರು ಭಾನುವಾರ ಭೇಟಿ ನೀಡಿ, ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು.ಮತ ಎಣಿಕಾ ಕೇಂದ್ರದಲ್ಲಿ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಸಿಆರ್ಪಿಎಫ್ ಸೈನಿಕರಿಂದ ಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತರ ಘಟನೆ ಆಗದಂತೆ ಮತಎಣಿಕ ಕೇಂದ್ರಕ್ಕೆ ಭದ್ರತೆ ನೀಡಲಾಗಿದೆ. ಸೋಮವಾರ ಬೆಳಗ್ಗೆ 7:30ಕ್ಕೆ ಮತಪೆಟ್ಟಿಗೆ(ಇವಿಎಂ ಮಷಿನ್) ಇರುವ ಸ್ಟ್ರಾಂಗ್ ರೂಂ ಓಪನ್ ಆಗಲಿದೆ.ಬೆಳಗ್ಗೆ 8 ಗಂಟೆಗೆ ಅಂಚೆ ಮತ ಎಣಿಕೆ ಆರಂಭವಾಗಲಿದ್ದು, ಬೆ. 8:30ಕ್ಕೆ ಇವಿಎಂ ನಲ್ಲಿನ ಮತ ಎಣಿಕೆ ಶುರುವಾಗಲಿದೆ. ಸಂಪೂರ್ಣ ಫಲಿತಾಂಶ ಹೊರಬಿದ್ದ ಬಳಿಕ 25 ಜನ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ ಆಗಲಿದೆ.ದಾವಣಗೆರೆಯ ಪಾಲಿಕೆ ಕಚೇರಿ ಆವರಣದಲ್ಲಿ ಚುನಾವಣಾಧಿಕಾರಿ ಸಂತೋಷ್ ಕುಮಾರ್ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ “ಮತ ಎಣಿಕೆ ಕಾರ್ಯವನ್ನು ಡಿಆರ್ಆರ್ ಶಾಲಾ ಆವರಣದಲ್ಲಿ ಆಯೋಜನೆ ಮಾಡಲಾಗಿದೆ. ಮೇ 04 ರ ಬೆಳಗ್ಗೆ 7-30ಕ್ಕೆ ಸ್ಟ್ರಾಂಗ್ ರೂಂ ಅನ್ನು ಅಭ್ಯರ್ಥಿಗಳು, ಏಜೆಂಟ್ಗಳ ಸಮ್ಮುಖದಲ್ಲಿ ಓಪನ್ ಮಾಡಲಾಗುತ್ತದೆ. 8 ಗಂಟೆಗೆ ಆರಂಭದ ಮೊದಲು ಪೋಸ್ಟಲ್ ವೋಟಿಂಗ್ ಎಣಿಕೆ, ನಂತರ ಇವಿಎಂ ಮಷಿನ್ ಕೌಂಟಿಂಗ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
14 ಟೀಬಲ್ಗಳಲ್ಲಿ ಮತ ಎಣಿಕೆ ಇರುತ್ತದೆ, ಒಟ್ಟು 21 ಸುತ್ತು ಮತ ಎಣಿಕೆ ನಡೆಯುತ್ತದೆ. ಮತ ಎಣಿಕಾ ಕೇಂದ್ರದಲ್ಲಿ ಮೂರು ವಿಭಾಗಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕಾ ಕೇಂದ್ರದ ಸುತ್ತ ನೂರು ಮೀಟರ್ ನಿಷೇಧಾಜ್ಞೆ ಜಾರಿಯಾಗಲಿದ್ದು, ಒಳಗೆ ಯಾರೂ ಬರುವಂತಿಲ್ಲ. ಅಭ್ಯರ್ಥಿಗಳಿಗೆ ಕೌಂಟಿಂಗ್ ಬೂತ್ಗಳಲ್ಲಿ ಕೂರುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.ಮತ ಎಣಿಕಾ ಸಿಬ್ಬಂದಿ, ಅಭ್ಯರ್ಥಿ, ಏಜೆಂಟ್ ಗಳಿಗೆ ಕ್ಯೂಆರ್ ಕೋಡ್ ಇರುವಂತ ಗುರುತಿನ ಪತ್ರ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ. ಪ್ರತಿ ಸುತ್ತಿನ ಡೇಟಾ ಎಂಟ್ರಿಯನ್ನು ಘೋಷಿಸಲು ಡೇಟಾ ಎಂಟ್ರಿ ತಂಡವನ್ನು ಮಾಡಿಕೊಂಡಿದ್ದು, ಅವರು ಘೋಷಿಸುತ್ತಾ ಹೋಗುತ್ತಾರೆ ಎಂದರು.
.
