
ಉದಯವಾಹಿನಿ, ಕತಿಹಾರ್(ಬಿಹಾರ): ಒಂದೇ ದಿನ ಭೀಕರ ಮಳೆ, ಬಿರುಗಾಳಿ ಮತ್ತು ಸಿಡಿಲಿಗೆ ಸಿಲುಕಿ 24 ಜನರು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಅಲ್ಲದೆ, ಅಪಾರ ಆಸ್ತಿ ಪಾಸ್ತಿ ಹಾನಿಯಾಗಿದೆ. ಬಿರುಗಾಳಿ, ಮಳೆ ಮತ್ತು ಮಿಂಚು 20 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಗಯಾ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ಈ ಸಾವುಗಳ ನಂತರ, ಮುಖ್ಯಮಂತ್ರಿಗಳ ಸಚಿವಾಲಯವು ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರವನ್ನು ಘೋಷಿಸಿದೆ.
ಬಿಹಾರಕ್ಕೆ ಮಾರಕವಾದ ಮೇ ತಿಂಗಳ ಮಳೆ: ಸೋಮವಾರ ಬೆಳಗ್ಗೆಯಿಂದ ಬಿಹಾರದ ಹಲವು ಜಿಲ್ಲೆಗಳಲ್ಲಿ ಆರ್ದ್ರತೆಯ ಉಷ್ಣತೆ ಇತ್ತು. ನಂತರ ಹವಾಮಾನವು ಹದಗೆಟ್ಟಿತು. ಸಂಜೆ 4 ಗಂಟೆಯ ನಂತರ ಮೋಡ ಕವಿದ ವಾತಾವರಣ ಕಂಡುಬಂತು. ಬಳಿಕ ಗುಡುಗು ಸಹಿತ ಮಳೆ, ಮತ್ತು ಮಿಂಚಿನ ಅಬ್ಬರ ಶುರುವಾಗಿತ್ತು.ಒಂದೇ ದಿನದಲ್ಲಿ 24 ಜನರ ಸಾವು: ಪಾಟ್ನಾ ಜಿಲ್ಲೆಯಲ್ಲಿ ಮರಗಳು ಮತ್ತು ಗೋಡೆಗಳು ಉರುಳಿ ಬಿದ್ದ ಪರಿಣಾಮ ಪ್ರವಾಹದಲ್ಲಿ ಇಬ್ಬರು, ಪೂರ್ವ ಚಂಪಾರಣ್ನಲ್ಲಿ- ಐವರು, ಗಯಾದಲ್ಲಿ- 4, ಔರಂಗಾಬಾದ್ನಲ್ಲಿ ಮಿಂಚಿನಿಂದ ಮೂವರು, ಗಯಾಜಿಯ ಶೇರ್ಘಾಟಿ, ಟಿಕಾರಿ ಮತ್ತು ಕೊಂಚ್ನಲ್ಲಿ ಐವರು, ರೋಹ್ತಾಸ್ ಜಿಲ್ಲೆಯಲ್ಲಿ ಒಬ್ಬರು, ವೈಶಾಲಿಯ ಲಾಲ್ಗಂಜ್ನಲ್ಲಿ ಓರ್ವ ಮಹಿಳೆ ಮತ್ತು ಸಂದೇಶ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಓರ್ವ ಯುವಕ ಮತ್ತು ಸೀತಾಮರ್ಹಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕತಿಹಾರ್ ರೈಲ್ವೆ ವಿಭಾಗದ ಅಜಮ್ನಗರ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 1 ರ ಬಳಿ 25,000 ವೋಲ್ಟ್ನ ಹೈಟೆನ್ಷನ್ ಓವರ್ಹೆಡ್ ತಂತಿಯ ಮೇಲೆ ಭಾರವಾದ ಮರದ ಕೊಂಬೆ ಬಿದ್ದು ಭಾರಿ ಬೆಂಕಿ ಹೊತ್ತಿಕೊಂಡಿತ್ತು. ಬಲವಾದ ಗಾಳಿಯಿಂದಾಗಿ ಮುರಿದ ಕೊಂಬೆ ನೇರವಾಗಿ ವಿದ್ಯುತ್ ತಂತಿಗಳ ಮೇಲೆ ಬಿದ್ದು, ಕಿಡಿಗಳು ಹಾರಿದ ಪರಿಣಾಮ ಇಡೀ ಪ್ರದೇಶ ಹೊಗೆಯಿಂದ ತುಂಬಿತ್ತು.
ರೈಲು ಕಾರ್ಯಾಚರಣೆ ಒಂದು ಗಂಟೆ ಕಾಲ ಅಸ್ತವ್ಯಸ್ತ: ಈ ಘಟನೆಯಿಂದಾಗಿ, ರೈಲು ಸಂಖ್ಯೆ 55708 (ಕತಿಹಾರ್-ರಾಧಿಕಾಪುರ ಪ್ಯಾಸೆಂಜರ್) ಸುಮಾರು ಒಂದು ಗಂಟೆ ಪ್ಲಾಟ್ಫಾರ್ಮ್ನಲ್ಲಿ ಸಿಲುಕಿಕೊಂಡಿತ್ತು. ರೈಲ್ವೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವವರೆಗೆ ಪ್ರಯಾಣಿಕರು ಕಾಯುವಂತಾಯಿತು. ಈ ಘಟನೆಯು ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಸಂಭವಿಸಿದೆ ಎಂದು ಹಿರಿಯ ಡಿಸಿಎಂ ಅನುಪ್ ಕುಮಾರ್ ಸಿಂಗ್ ಹೇಳಿದರು. ಎಂಜಿನಿಯರಿಂಗ್ ತಂಡದ ತ್ವರಿತ ಕ್ರಮದಿಂದಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಮತ್ತು ರೈಲು ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ತರಲಾಯಿತು. ಇಲ್ಲಿ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ತಿಳಿಸಿದರು.
ಶಿಥಿಲಗೊಂಡ ಮೂಲಸೌಕರ್ಯಗಳ ಬಗ್ಗೆ ಜನರ ಆಕ್ರೋಶ : ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿ, ಸೀತಾಮರ್ಹಿಯ ಹಲವಾರು ಸ್ಥಳಗಳಲ್ಲಿ ಗಂಟೆಗಟ್ಟಲೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಶಿಥಿಲಗೊಂಡ ಕಂಬಗಳು ಬಹಳ ದಿನಗಳಿಂದ ಅಪಾಯಕಾರಿಯಾಗಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಗಯಾ ಜಿಲ್ಲೆಯ ಶೇರ್ಘಾಟಿಯಲ್ಲಿ ಮೂವರು ಅಪ್ರಾಪ್ತ ವಿದ್ಯಾರ್ಥಿಗಳ ದುರಂತ ಸಾವು ಸಂಭವಿಸಿದೆ. ಗಯಾ ಜಿಲ್ಲೆಯ ಶೇರ್ಘಾಟಿ ಪೊಲೀಸ್ ಠಾಣೆ ವ್ಯಾಪ್ತಿಯ ಯೋಗಾಪುರ ಗ್ರಾಮದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ. ಪೂರ್ವ ಚಂಪಾರಣ್ನಲ್ಲೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
