ಉದಯವಾಹಿನಿ, ಜೈಪುರ: ಲಂಚ ಪಡೆದ ಪ್ರಕರಣದಲ್ಲಿ ಪತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿರುವ ಬೆನ್ನಲ್ಲೇ ಜೈಪುರ ಹೆರಿಟೇಜ್ ಮಹಾನಗರ ಪಾಲಿಕೆಯ ಮೇಯರ್ ಮುನೇಶ್ ಗುರ್ಜರ್ ಅವರನ್ನು ಅಮಾನತು ಮಾಡಲಾಗಿದೆ. ಜಮೀನು ಗುತ್ತಿಗೆಗೆ ನೀಡುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ₹2 ಲಕ್ಷ ಲಂಚ ಪಡೆದ ಆರೋಪದಲ್ಲಿ ಮುನೇಶ್ ಅವರ ಪತಿ ಸುಶೀಲ್ ಗುರ್ಜರ್ ಹಾಗೂ ಮಧ್ಯವರ್ತಿಗಳಾದ ನಾರಾಯಣ ಸಿಂಗ್ ಮತ್ತು ಅನಿಲ್ ದುಬೆ ಎಂಬವರನ್ನು ಎಸಿಬಿ ಶುಕ್ರವಾರ ಬಂಧಿಸಿತ್ತು. ಬಳಿಕ ಗುರ್ಜರ್ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದ ಎಸಿಬಿ ₹40 ಲಕ್ಷ ನಗದು, ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ನಾರಾಯಣ ಸಿಂಗ್ ಮನೆಯಲ್ಲಿ ₹8 ಲಕ್ಷ ನಗದು ಪತ್ತೆಯಾಗಿತ್ತು.’ಈ ಪ್ರಕರಣದಲ್ಲಿ ಮುನೇಶ್ ಅವರು ಭಾಗಿಯಾಗಿರುವ ಸಾಧ್ಯತೆ ಇರುವುದಾಗಿ ಶಂಕಿಸಲಾಗಿದೆ. ಈ ಕಾರಣಕ್ಕೆ ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಮೇಯರ್ ಸ್ಥಾನದಿಂದ ಅಮಾನತುಗೊಳಿಸಲಾಗಿದೆ’ ಎಂದು ಸ್ಥಳೀಯಾಡಳಿತ ಇಲಾಖೆಯ ನಿರ್ದೇಶಕ ಹೃದೇಶ್ ಕುಮಾರ್ ಶರ್ಮಾ ಹೇಳಿದ್ದಾರೆ.
