ಉದಯವಾಹಿನಿ, ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದ ದೂರ ಇಡುವ ನಿಟ್ಟಿನಲ್ಲಿ ಇಂಡಿಯಾ ಒಕ್ಕೂಟ ರಚಿಸಿಕೊಂಡು ಒಗಟ್ಟು ಪ್ರದರ್ಶಿಸುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್-ಟಿಎಂಸಿ ನಾಯಕರಲ್ಲಿ ಆಗಾಗ್ಗೆ ಪರಸ್ಪರ ಆರೋಪ, ಟೀಕೆ ಸರ್ವೇ ಸಾಮಾನ್ಯವಾಗಿರುವಂತೆಯೇ ಇದೀಗ ಮತ್ತೆ ಬಿರುಕು ಕಾಣಿಸಿಕೊಂಡಿದೆ.
ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪಕ್ಷದ ವಿಜಯಶಾಲಿ ಅಭ್ಯರ್ಥಿಗಳಿಗೆ ಪೊಲೀಸರು ಮತ್ತು ಗೂಂಡಾಗಳು ಬೆದರಿಕೆ ಹಾಕುತ್ತಿದ್ದು, ಆಡಳಿತಾರೂಢ ಟಿಎಂಸಿಗೆ ಸೇರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅೀಧಿರ್ ರಂಜನ್ ಚೌಧರಿ ಆರೋಪಿಸಿದ್ದಾರೆ. ಈ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.
ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಲ್ಲೆಲ್ಲಾ, ಪೊಲೀಸರು, ರಾಜಕೀಯ ಮುಖಂಡರು, ಗೂಂಡಾಗಳು ಕೊಲೆ ಮತ್ತು ಇತರ ಆರೋಪಗಳ ಮೂಲಕ ಬೆದರಿಕೆ ಹಾಕುತ್ತಿದ್ದು, ಟಿಎಂಸಿ ಸದಸ್ಯತ್ವವನ್ನು ಸ್ವೀಕರಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದು ಮುಂದುವರೆದರೆ ಮುಂಬರುವ ದಿನಗಳಲ್ಲಿ ದೊಡ್ಡ ಆಯಾಮ ಪಡೆಯುವ ಸಾಧ್ಯತೆಯಿದ್ದು, ಇದು ರಾಷ್ಟ್ರದ ಮತ್ತು ಪಶ್ಚಿಮ ಬಂಗಾಳದ ಪ್ರಜಾಪ್ರಭುತ್ವದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಚೌಧರಿ ಬರೆದಿರುವ ಎರಡು ಪುಟುಗಳ ಪತ್ರದಲ್ಲಿ ತಿಳಿಸಿದ್ದಾರೆ.
