
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಶಾದಿಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಹಾಗೂ ಗ್ರಾಮದ ಪಶು ಚಿಕಿತ್ಸಾಲಯ ಕೇಂದ್ರಕ್ಕೆ ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ್ ಭೇಟಿ ನೀಡಿ ಶಾಲೆಯ ವ್ಯವಸ್ಥೆ ಹಾಗೂ ಪಶು ಚಿಕಿತ್ಸಾಲಯ ವ್ಯವಸ್ಥೆ ಪರಿಶೀಲನೆ ಮಾಡಿದರು.
ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೇರಿ ಮಿಟ್ಟಿ ಮೇರಾ ದೇಶ್ ಎಂಬ ಚಟುವಟಿಕೆಯ ಕಾರ್ಯಕ್ರಮದ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಿ ಮಾತನಾಡಿದ ಅವರು,ಆಗಸ್ಟ್ 15 ರಂದು ಸ್ವಾತಂತ್ರ್ಯೋ ತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಅಮೃತ ಸರೋವರದ ತಾಣದಲ್ಲಿ ಶಾಲಾ ಮಕ್ಕಳಿಗೆ ಚಿತ್ರಕಲೆ ಘೋಷಣೆ ಬರೆಯುವುದು,ರಂಗೋಲಿ ಹಾಕುವುದು,ಗ್ರಾಮೀಣ ಆಟಗಳಾದ ಖೋಖೋ,ಲಗೋರಿ,ಹಗ್ಗ ಜಗ್ಗಾಟ,ಹಗ್ಗ ಜಿಗಿತ,ಕುಂಟ ಓಟ,ಕುರ್ಚಿ ಓಟ ಇತ್ಯಾದಿಗಳನ್ನು ಆಯೋಜಿಸಿ ಸದರಿ ಚಟುವಟಿಕೆಗಳ ತಯಾರಿಕೆಗಾಗಿ ತಗಲುವ ವೆಚ್ಚವನ್ನು ಗ್ರಾಮ ಪಂಚಾಯಿತಿ ವತಿಯಿಂದ ಭರಿಸಲಾಗುವುದು ಸದರಿ ಚಟುವಟಿಕೆಗಳ ಕುರಿತು ತಯಾರಿ ನಡೆಸಲು ಶಾಲಾ ಮುಖ್ಯಗುರುಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳ ಜೋತೆಗೂಡಿ ಶಾಲೆಯಲ್ಲಿ ವಿತರಿಸುವ ಬಿಸಿಯೂಟದ ವ್ಯವಸ್ಥೆಯನ್ನು ಮಕ್ಕಳಿಂದ ಮಾಹಿತಿ ಪಡೆದುಕೊಂಡು ಊಟದ ವ್ಯವಸ್ಥೆ ಪರಿಶೀಲಿಸಿದರು.
ತದನಂತರ ಸರ್ಕಾರದ ನಿರ್ದೇಶನದಂತೆ ದೇಶಕ್ಕಾಗಿ ಹುತಾತ್ಮರಾದ ಯೋಧರ ಗೌರವಾರ್ಥ ಅಮೃತ ಸರೋವರದ ಬಳಿ ಶಿಲಾಫಲಕವನ್ನು ಸ್ಥಾಪಿಸಲು ಸದರಿ ಶಿಲಾಫಲಕದಲ್ಲಿ ಗ್ರಾಪಂ.ಹೆಸರು,ಪ್ರಧಾನಮಂತ್ರಿಗಳ 2047ರ ಘೋಷ ವಾಕ್ಯ,ಮುಖ್ಯಮಂತ್ರಿಗಳ ಘೋಷ ವಾಕ್ಯ,ಬಸವಣ್ಣನವರ ವಚನ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ದೇಶಕ್ಕಾಗಿ ಮಡಿದ ವೀರ ಯೋಧರ ಹೆಸರುಗಳನ್ನು ಬರೆಸಬೇಕು ಎಂದು ಪಿಡಿಓ ರಾಮಕೃಷ್ಣರವರಿಗೆ ಸೂಚಿಸಿದರು.
ಶಾದಿಪೂರ: ಪಶು ಚಿಕಿತ್ಸಾಲಯ ಕೇಂದ್ರಕ್ಕೆ ತಾಪಂ.ಇಒ ಶಂಕರ ರಾಠೋಡ್ ಭೇಟಿ ನೀಡಿ ಔಷಧಗಳ ದಾಸ್ತಾನು, ಔಷಧಗಳು ದಿನಾಂಕಗಳನ್ನು,ಜಾನುವಾರುಗಳ ದಿನನಿತ್ಯದ ಚಿಕಿತ್ಸಾ ಮಾಹಿತಿಯ ದಿನಚರಿ,ಔಷಧಿ ಸಂಗ್ರಹಣ ಕೋಣೆ ಹಾಗೂ ಜಾನುವಾರುಗಳ ವಿವಿಧ ರೋಗಗಳ ಮಾಹಿತಿ ಪಡೆದು ಯಾವುದೇ ಜಾನುವಾರುಗಳು ರೈತರು ಸಾರ್ವಜನಿಕರು ಪಶು ಆಸ್ವತ್ರೆಗೆ ತಂದಿದ ಕ್ಷಣ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ ಸರ್ಕಾರದಿಂದ ಸಿಗುವ ಸೌಲಭ್ಯ ಹಾಗೂ ಉಚಿತ ಚಿಕಿತ್ಸೆ ನೀಡಬೇಕು ಎಂದು ಪಶು ವೈದ್ಯರಿಗೆ ಅವರು ಸೂಚಿಸಿದರು.
