
ಉದಯವಾಹಿನಿ ದೇವದುರ್ಗ: ಪಡಿತರ ಕಾರ್ಡ್ ತಿದ್ದುಪಡಿ ಸರ್ವರ್ ಸಮಸ್ಯೆ ಬಗೆಹರಿಸಬೇಕು ಎಂದು ಸಿಪಿಐ-ಎಲ್ ರೆಡ್ಸ್ಟಾರ್ ತಾಲೂಕು ಸಮಿತಿ ಪದಾಧಿಕಾರಿಗಳು ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಬರೆದ ಮನವಿ ತಹಶೀಲ್ದಾರ ಮುಖಾಂತರ ಸಲ್ಲಿಸಿದರು. ದಿನೇ ದಿನೇ ಸರ್ವರ್ ಸಮಸ್ಯೆಯಿಂದ ಹಳ್ಳಿಗಳಿಂದ ಬಂದಂತ ಜನರು ವಾಪಸ್ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೆ 5ರಿಂದ 10 ಕಾರ್ಡ್ ತಿದ್ದುಪಡಿ ಆಗುತ್ತಿವೆ. ಇಂತಹ ಸರ್ವರ್ ಸಮಸ್ಯೆ ಹಿನ್ನೆಲೆ ಕಾರ್ಡ್ ತಿದ್ದುಪಡಿ ಒಂದು ವಾರ ವಿಸ್ತರಿಸಬೇಕು. ಪಡಿತರ ಕಾರ್ಡ್ನಲ್ಲಿ ತಿದ್ದುಪಡಿ ಅರ್ಜಿ ಹಾಕಲು 24ಗಂಟೆ ಅವಕಾಶ ನೀಡಬೇಕು. ಆಹಾರ ಮತ್ತು ನಾಗರಿಕ ಇಲಾಖೆಯ ಹೋಬಳಿ ಮಟ್ಟದ ಸರ್ವರ್ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಖಾಸಗಿ ಸೈಬರ್ ಕೇಂದ್ರಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಸಂಬಂಧಪಟ್ಟಂತ ಅಧಿಕಾರಿಗಳು ಕೇಂದ್ರಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರಿದರು. ಪಡಿತರ ಚೀಟಿ ತಿದ್ದುಪಡಿ ಹೆಸರಿನಲ್ಲಿ ಭಾರಿ ಅಕ್ರಮ ಆಗುತ್ತಿದ್ದು, ಇದನ್ನು ಅಧಿಕಾರಿಗಳು ತಡೆಯಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಕೆ.ಗಿರಿಲಿಂಗಸ್ವಾಮಿ, ಕಾರ್ಯದರ್ಶಿ ಶಿವರಾಮ್ ಕಟ್ಟಿಮನಿ, ಮಲ್ಲಪ್ಪ ಅಂಜಳಾ, ಜೈಗೌಡ, ಬಸವರಾಜ, ಆನಂದ ಮುಂಡರಗಿ, ಶಿವನಗೌಡ ಸೇರಿ ಇತರರು ಇದ್ದರು.
