
ಉದಯವಾಹಿನಿ, ಔರಾದ್ :ಕೌಶಲ್ಯ ಶಕ್ತಿಯನ್ನು ವರ್ತಮಾನದ ಅವಶ್ಯಕತೆಗೆ ತಕ್ಕಂತೆ ಬಳಸಿದಲ್ಲಿ ಮಾತ್ರ ತಮ್ಮೆಲ್ಲರ ಬದುಕಿಗೆ ನೈಜ ಅರ್ಥ ಬರಲು ಸಾಧ್ಯ ಎಂದು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ನುಡಿದರು.ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಪ್ರಥಮ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾವಲಂಬಿ ಜೀವನ ನಡೆಸುವಂತಾಗಬೇಕು. ಮೊದಲು ತಾನು ಸ್ವಾತಂತ್ರ್ಯ ಬದುಕು ಕಟ್ಟಿಕೊಳ್ಳುವುದಲ್ಲದೇ ಇನ್ನಿತರರ ಬದುಕಿಗೂ ಪ್ರೇರಣೆಯಾಗಬೇಕು ಎಂದರು.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯರಾದ ವಿಜಯಕುಮಾರ್ ಜಾಧವ್ ಮಾತನಾಡಿ, ಘಟಿಕೋತ್ಸವ ಎನ್ನುವುದು ಸಂಭ್ರಮಾಚರಣೆಯಲ್ಲ, ಬದುಕು ರೂಪಿಸುವ ಕಾಲ. ನಿಮ್ಮ ಮೇಲೆ ಪೋಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳುವುದು ಸಹಜ ಆದರೆ ಆ ಒತ್ತಡಗಳಿಂದ ಹೊರಬಂದು ಸ್ವಸಾಮರ್ಥ್ಯ ಅರಿತು ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.ಸಂಪನ್ಮೂಲ ಶಿಕ್ಷಕ ಬಾಲಾಜಿ ಅಮರವಾಡಿ ಮಾತನಾಡಿ, ಉದ್ಯೋಗ ಪಡೆದ ಬಳಿಕ ಮಾನವೀಯತೆ ಹಾಗೂ ನಮೃತೆ ಉಳಿಸಿಕೊಂಡು ಹೋಗುವುದು ನಾವು ಶಿಕ್ಷಣ ಪಡೆದಿರುವುದಕ್ಕೂ ಸಾರ್ಥಕವಾಗುತ್ತದೆ. ಅಲೋಚನೆಗೆ ಸ್ವಾತಂತ್ರ್ಯರಾಗಿ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದರು.
ಅಗ್ರಶ್ರೇಣಿಯಲ್ಲಿ ತೇರ್ಗಡೆಯಾದ ಸಂತೋಷ ಹಾಗೂ ಬೀಜಾನಬೀ ಅವರನ್ನು ಸನ್ಮಾನಿಸಲಾಯಿತು.೨೦೨೦-೨೧ ಹಾಗೂ ೨೦೨೧-೨೨ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಾಚಾರ್ಯರಾದ ಶಿವಶಂಕರ ಟೋಕರೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಯುಸುಫಮಿಯ್ಯ ಜೋಜನಾ, ಚಂದ್ರಕಾಂತ ಹುಲಸೂರೆ, ಸತೀಶಕುಮಾರ ಬೆಳ್ಳೂರೆ, ಸಂಗಮೇಶ ಮರಕಲೆ, ಮಹೇಂದ್ರ, ಕಿರಣ, ಮುದಾಬೀರ್, ಜಗನ್ನಾಥ ಗಡ್ಡೆ, ಸುಧೀರ ನಾಗೂರೆ, ಗಂಗಾರಾಮ ನಾಗೂರೆ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
